Wednesday, May 22, 2019

ಸಗಣಿ ಕರಡುವ ಪ್ರಹಸನ!!

         ಮೊದ ಮೊದಲು ದೊಡ್ಡ ಕಲ್ಲಿನ ಕೊಟ್ಟಿಗೆಯನ್ನು ಕೊರ್ಲು ಹಿಡಿಯಿಂದ ಬಗ್ಗಿ ಕೆರೆಯುವುದನ್ನು ತಪ್ಪಿಸಿಕೊಳ್ಳಲು ಸಗಣಿ ಕರುಡುವುದಕ್ಕೆ ಹೋಗಲು ಪ್ರಾರಂಭಿಸಿದ್ದೆ. ಕ್ರಮೇಣ ಸಗಣಿ ಕರುಡುವುದು ಇಷ್ಟದ ಕೆಲಸವಾಯಿತು. ಹಿನ್ನೆಲೆ ಹೇಳಿಕೊಂಡು ಮುಂದೆ ಹೋಗುವುದು ಒಳಿತು. ಅವಿಭಕ್ತ ಸುತ್ಮನೆ ಅಂಗಡಿ ಅಜ್ಜನಮನೆಯ ಕೊಟ್ಟಿಗೆ ದೊಡ್ಡದಿತ್ತು. ಎರಡು ಸಾಲುಗಳಲ್ಲಿ ಆಕಳು ಎಮ್ಮೆ ಕಟ್ಟುವುದಕ್ಕೆ ಕಲ್ಲು ಹಾಸಿ ದೊಣಕಲು ಕಟ್ಟಿ ಸುಸಜ್ಜಿತವಾದ ಕೊಟ್ಟಿಗೆಯಿತ್ತು. ಸಮಸ್ಯೆಯೆಂದರೆ ಪ್ರತಿ ದಿನ ಕೊಟ್ಟಿಗೆ ತೊಳೆಯುವದಕ್ಕೆ ಕನಿಷ್ಠ ಇಬ್ಬರಿಗೆ ಒಂದು ಒಪ್ಪೊತ್ತಿನ ಕೆಲಸವಾಗುತ್ತಿತ್ತು. ಕೆಳಗಿನ ಸಾಲಿನಲ್ಲಿ ಹಾಸಿದ ಕಲ್ಲಿನಮೇಲೆ ಒಟ್ಟುಮಾಡಿಟ್ಟಿದ್ದ ಸಗಣಿಯನ್ನು ಬುಟ್ಟಿ ತುಂಬಿ ಸಗಣಿ ಕರಡುವ ಟ್ಯಾಂಕ್ ಗೆ ಸಾಗಿಸುವ ಕೆಲಸದಿಂದ ಮೊದಲ್ಗೊಂಡು, ದೊಣಕಲು ಗುಡಿಸಿ, ಕೊಟ್ಟಿಗೆ ನೆಲವನ್ನು ಉದ್ದ ಕಡ್ಡಿ ಹಿಡಿಯಿಂದ ಗುಡಿಸಿ, ಗುಡಿಸಿ ಒಟ್ಟಾದ ಹುಲ್ಲಿನ ಕಸವನ್ನು ಗೊಬ್ಬರ ಗುಂಡಿಗೆ ಎಸೆದು, ನೀರು ಹಾಕಿ ಕೊರ್ಲು ಹಿಡಿಯಿಂದ ಕೆರೆದು ಕೊನೆಗೆ ನೀರು ಹಾಕಿ ನೆಲವನ್ನು ತೊಳೆದು, ಸಗಣಿ ಕರಡಿ, ತುಂಬಿದ ಗ್ಯಾಸ್ ಡ್ರಮ್ ನಿಂದ ಬಂದ ರಾಡಿಯನ್ನು ಗೊಬ್ಬರಗುಂಡಿಗೆ ಸೋಕುವುದರೊಂದಿಗೆ ಕೊಟ್ಟಿಗೆ ಕೆಲಸ ಮುಗಿಯುತ್ತಿತ್ತು.


                 ಸಗಣಿಯನ್ನು ಬುಟ್ಟಿ ತುಂಬುವುದೋ, ದೊಣಕಲು ಗುಡಿಸುವುದೋ  ಅಂತಹ ಕಷ್ಟದ ಕೆಲಸ ಎನಿಸುತ್ತಿರಲಿಲ್ಲ. ಕೊರ್ಲು ಹಿಡಿಯಿಂದ ಕಲ್ಲಿನ ನೆಲವನ್ನು ಕೆರೆಯುವುದಿತ್ತಲ್ಲ ಅದು ಪರಮ ಶಕ್ತಿಯ ಅಪವ್ಯಯದಂತೆ ಕಾಣುತ್ತಿತ್ತು. ಬೇರೆ ಬೇರೆ ಕಡೆ ಗುಡಿಸಲು ಹಾಗೂ ಬೇರೆ ಬೇರೆ ರೀತಿಯ ಗುಡಿಸುವಿಕೆಗೆ ಬೇರೆ ಬೇರೆ ಹತ್ಯಾರಗಳನ್ನೇ ತಯಾರು ಮಾಡಿಟ್ಟಿದ್ದರು ತಜ್ಞರಾದ "ಅಣ್ಣ" ಹಾಗೂ "ಕಾಕಾ". ದೊಣಕಲು ಗುಡಿಸಲು ಈಚಲು ಹಿಡಿ, ಸಗಣಿ ತೆಗೆದ ತಕ್ಷಣ ಕೊಟ್ಟಿಗೆ ಗುಡಿಸಲು ಉದ್ದನೆಯ ಕಡ್ಡಿ ಹಿಡಿ, ಕೊಟ್ಟಿಗೆ ನೆಲವನ್ನು ಕೆರೆಯಲು ಮೊಂಡಾದ ಕೊರ್ಲು ಹಿಡಿ ಹೀಗೆ. ಕೊರ್ಲು ಹಿಡಿಯೋ ಕಟ್ಟಿನಿಂದ ಒಂದು ಗೇಣು ಉದ್ದವಿರುತ್ತಿತ್ತು. ಅದನ್ನು ಹಿಡಿದು ನೆಲ ಕೆರೆಯಬೇಕೆಂದರೆ ಪ್ರಾಯಶ ಮಲಗಿದ ರೀತಿಯಲ್ಲಿ ಬಗ್ಗಬೇಕಾಗುತ್ತಿತ್ತು. ಪ್ರತಿ ದಿನವೂ ಬೀಳುವ ಮೂತ್ರದ ಧಾರೆಯಿಂದ ನೆಲ ಜಾರಿಯಾಗದಂತೆ ತಿಕ್ಕಬೇಕಾಗಿತ್ತು. ನೆಲಕ್ಕೆ ಹಿಡಿದ ಸಗಣಿ, ಕಲ್ಲಿನ ಪಡಕುಗಳಲ್ಲಿ ಕುಳಿತ ಅದರ ಅವಶೇಷ ಮಲಗಿದ ಹೈನುಗಳ ಮೈಗೆ ಬಡಿಯದಂತೆ ಚೊಕ್ಕ ಮಾಡಬೇಕಾಗಿತ್ತು. ಮೇಲೆ ಹೇಳಿದ ತಜ್ಞರ ಅಭಿಪ್ರಾಯವನ್ನೇ ಮಾನದಂಡವೆಂದು ಒಪ್ಪಿಕೊಂಡರೆ ನನ್ನಂತವನಿಗೆ ಚೊಕ್ಕ ಮಾಡಲು ಇಡೀ ದಿನ ಬೇಕಾಗುವುದರಲ್ಲಿ ಸಂದೇಹವಿರಲಿಲ್ಲ.


          ಉಳಿದೆಲ್ಲವುಗಳಿಗಿಂತ ಸಗಣಿ ಕರಡುವುದು ಸಸಾರವೆಂದು ಪ್ರಾರಂಭಿಸಿದ ಕೆಲಸ ಇಷ್ಟು ಪ್ರಿಯವಾಗಿದ್ದು ಖುಷಿ. ಇದೇನೂ ನೋಡುವವರ ಕಣ್ಣಿಗೆ ಕಾಣಿಸುವಷ್ಟು ಸುಲಭ ಸಾಧ್ಯವಾದದ್ದಲ್ಲ. ಟ್ಯಾಂಕಿನಲ್ಲಿ ತುಂಬಿದ ಸಾಗಣಿಗೆ ಬೇಕಾಗುವಷ್ಟು ಮಾತ್ರದ ನೀರನ್ನು ಸೇರಿಸಿ ಒಂದೂ ಉಂಡೆ ಉಳಿಯದಂತೆ ಕರಡುವುದು ಅಪ್ಪೆಹುಳಿಯಲ್ಲಿ ಸಾಸಿವೆ ಕಾಳನ್ನು ಹೆಕ್ಕಿ ಬಾಳೆ ಎಲೆಯ ತುದಿಗೆ ಇಡುವಷ್ಟೇ ಕಷ್ಟದ ಕೆಲಸ. ನಾಡ ಆಕಳ ಸಗಣಿಯಂತೂ ಗಟ್ಟಿ ಉಂಡೆಯಂತಿರುವುದರಿಂದ ಅವನ್ನು ಹುಡುಕಿ ಕಾಲ ಕೆಳಗೆ ಇಟ್ಟು ಅರೆದು ಕರಡಬೇಕು. ಎಲ್ಲ ಉಂಡೆಗಳೂ ಅರೆದು ಕರಡಿದಮೇಲೆ ತೇಲುವ ಹುಲ್ಲಿನ ಕಸವನ್ನು ತೆಗೆಯಬೇಕು. ಚೊಕ್ಕವಾಗಿ ಕಸವನ್ನು ಆರಿಸಿಯಾದಮೇಲೆ ಹದವಾದ ರಾಡಿಯನ್ನು ಗ್ಯಾಸ್ ಡ್ರಮ್ ನ ಹೊಂಡಕ್ಕೆ ಬಿಡಬೇಕು. ಗ್ಯಾಸ್ ಡ್ರಮ್ ನ ಹೊಂಡಕ್ಕೆ ರಾಡಿ ಬಿಡುವ ಪೈಪ್ ಗೆ ಮುಚ್ಚುವ ಬಿರಡೆಗೆ ಗಟ್ಟಿ ಸಗಣಿಯನ್ನು ಮೆತ್ತಿ ಟ್ಯಾಂಕ್ ಗೆ ಬಂದು ಬೀಳುವ ನೀರು ಅಥವಾ ಮೂತ್ರ ಸೋರಿಕೆಯಾಗುವುದಿಲ್ಲ ಎಂದು ಖಾತ್ರಿಪಡಿಸಿಕೊಂಡು ಟ್ಯಾಂಕ್ ನಿಂದ ಆಚೆ ಬರಬೇಕು. ಅಜಮಾಸು ಮುಕ್ಕಾಲು ಗಂಟೆ ಬೇಕಾಗುವ ಈ ಕೆಲಸ ಧ್ಯಾನದಂತೆ ಅನಿಸುತ್ತಿತ್ತು.


                   ಕೊಟ್ಟಿಗೆ ಕೆಲಸದಲ್ಲಿ ತಜ್ಞರಾದ ಅಣ್ಣನೋ ಕಾಕನೋ ಸಗಣಿ ಕರಡುವುದು ನೋಡಲು ಚಂದ. ಟ್ಯಾಂಕ್ ಗೆ ಇಳಿಯುವುದಕ್ಕಿಂತ ಮುಂಚಿನ ತಯಾರಿ ನೋಡಿದರೆ ಯಾರಿಗಾದರೂ ತಿಳಿಯುತ್ತಿತ್ತು, ಇವ ಸಗಣಿ ಕರಡಲು ಹೊರಟನೆಂದು. ಬಗ್ಗಿ ಕರಡುವಾಗ ಜನಿವಾರ ನೆನೆಯಬಾರದೆಂದು ಬಿಗಿ ಮಾಡಿಕೊಳ್ಳುವುದರಿಂದ ಹಿಡಿದು, ಹಾಕಿಕೊಂಡ ಬಿಳಿ ಪಂಚೆಯೊ, ವಸ್ತ್ರವೋ ರಾಡಿಗೆ ತಾಗಬಾರದೆಂದು ಮಡಚಿ ಕಟ್ಟಿಕೊಳ್ಳುವುದು ಹೀಗೆ ಬಹಳ ತಯಾರಿ ಇರುತ್ತಿತ್ತು. ಕೆಲವೊಮ್ಮೆ ವಾಸನೆ ಬರಬಾರದೆಂದು ಕೈ ಕಾಲಿಗೆ ತೆಂಗಿನೆಣ್ಣೆ ಹಚ್ಚಿಕೊಂಡು ಟ್ಯಾಂಕ್ ಗೆ ಇಳಿಯುತ್ತಿದ್ದರು. ಕಾಕನಂತೂ ಹೊಸದಾದ ಕವಳ ಹಾಕಿಕೊಂಡೇ ಟ್ಯಾಂಕ್ ಗೆ ಇಳಿಯುತ್ತಿದ್ದ. ಅವರ ತಾಳ್ಮೆ, ಶ್ರದ್ಧೆ ಕೆಲಸದ ಬಗೆಗಿನ ಪ್ರೀತಿ ನೋಡಿದವರಿಗೆ ಪ್ರೇರೇಪಣೆ ನೀಡುವುದರಲ್ಲಿ ಸಂದೇಹವಿಲ್ಲ.


           ಈಗಲೂ ಮನೆಗೆ ಹೋದಾಗ ಅವಕಾಶ ಸಿಕ್ಕರೆ ಸಗಣಿ ಕರಡಲು ಹೋಗುತ್ತೇನೆ. ಈಗ ಮೊದಲಿನಷ್ಟು ಕಾಲ್ನಡೆ ಇಲ್ಲ, ಸಗಣಿಯೂ ಒಟ್ಟಾಗುವುದಿಲ್ಲ. 

Sunday, September 17, 2017

ಲಿಗಾಡಿ!!

ಬಹಳ ದಿನಗಳ ನಂತರ, ದಿನಗಳೇನು ವರ್ಷಗಳ ನಂತರ ನನ್ನ ಹಳೆಯ ಹವ್ಯಾಸವಾದ ಚಿತ್ರ ಬಿಡಿಸುವುದು, ಕರಕುಶಲ ವಸ್ತು ಮಾಡುವುದು ಪ್ರಾರಂಭಿಸಿದೆ. ಮತ್ತೆ ಪ್ರಾರಂಭಿಸುವುದಕ್ಕೆ ವಿನುತಾಳ ಒತ್ತಾಯ ಮೂಲ ಕಾರಣ. ಅವಳ ಸಲಹೆ, ಮೂಲ ಯೋಚನೆಯೊಂದಿಗೆ ಪುನಃ ಪ್ರಾರಂಭವಾದ ಹವ್ಯಾಸ ಈಗ ದಿನಾ ಮುಂದುವರೆದಿದೆ. ಪೂರ್ತಿಯಾಯಾಗಿ ಹವ್ಯಾಸಗಳನ್ನೆಲ್ಲ ಮರೆತು ಸಂಪೂರ್ಣವಾಗಿ ದಿನಗೆಲಸ ಮಾಡುವ ಯಂತ್ರಮಾನವನೇ ಆಗಿಹೋಗಿದ್ದೇನೆ ಎಂಬ ನನ್ನ ಭ್ರಮೆಯನ್ನು ನಿವಾಳಿಸಿದ ಶ್ರೇಯ ವಿನುತಾಳಿಗೆ.

ಯಾರೋ ಮಾಡಿದ ರಾತ್ರಿ ದೀಪವನ್ನು ನೋಡಿ "ನೀನೂ ಯಾಕೆ ಅದನ್ನೊಂದು ಮಾಡಬಾರದು?" ಎಂಬ ಮೊದಲ ಒತ್ತಾಯ ಸುಮಾರು ದಿನ ಅಪ್ಪಳಿಸಿದ ಮೇಲೆ ನಾನೂ ಮನಸ್ಸು ಮಾಡಿದೆ. youtube.com ನೋಡಿ ಹೇಗೆ ಮಾಡುವುದೆಂದು ತಿಳಿದೆ. ಒಂದು ಕಟ್ಟು ಸೊಣಬೇದಾರ, ಬಲೂನು, ಅಂಟನ್ನು ತಂದು "ರಾತ್ರಿ ದೀಪ" ಮಾಡಿದ ಮೇಲೆ, ಅದನ್ನು ನೋಡಿ ಭ್ರಮ ನಿರಾಸನವಾಗುವ ಪ್ರಸಂಗವನ್ನು ಸ್ವಲ್ಪದರಲ್ಲಿ ತಪ್ಪಿಸಿದೆ. ಬಲೂನಿಗೆ ಸುತ್ತಿದ ಸೊಣಬೇದಾರವನ್ನು ಹಕ್ಕಿಯ ಗೂಡನ್ನಾಗಿ ಪರಿವರ್ತಿಸಿ ಮಾನ ಉಳಿಸಿಕೊಂಡೆ


ಒಂದು ಪ್ರಯತ್ನವಾದ ಮೇಲೆ ಮಾಡಬಹುದೆಂಬ ಆತ್ಮವಿಶ್ವಾಸದಲ್ಲಿ ಕೈಗೆ ಸಿಕ್ಕ ದಾರವನ್ನೆಲ್ಲ ಉಪಯೋಗಿಸಿ ಒಂದು ರಾತ್ರಿ ದೀಪವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಮನೆಯಲ್ಲಿ ಔಷಧಿಗೆ ಬೇಕು ಅಂದರೂ ಒಂದು ದಾರವೂ ಉಳಿಯಲಿಲ್ಲ. ಯಶಸ್ವಿಯಾದ ದೀಪ ಸರಿಯಾದ ಆಕಾರದಲ್ಲಿ ನಿಲ್ಲದೇ ಹೋದದ್ದರಿಂದ ಒಂದು ದೊಡ್ಡ ಪ್ಲಾಸ್ಟಿಕ್ ಬಾಲ್ ತಂದು ಅದಕ್ಕೆ ದಾರವನ್ನು ಸುತ್ತಿ ಒಂದು ಸರಿಯಾದ ದೀಪ ಮಾಡಿದೆ, ಇದು ಸಮಾಧಾನ ಕೊಟ್ಟಿತು, ನನಗೋ? ವಿನುತಾಳಿಗೋ?



youtube.com ನೋಡುವಾಗ ಕಾಗದದ ಕಲಾಕೃತಿ ನೋಡಿದೆ. ಅದನ್ನೂ ಮಾಡಿದೆ. ಆದರೆ ಬಣ್ಣ ಬಳಿಯುವಾಗ ಎಡವಿದೆ. ಹಳೆಯ ಬಣ್ಣದ ಖಜಾನೆ ತೆಗೆದು ನೋಡಿದರೆ ಎಲ್ಲ ಬಣ್ಣಗಳೂ ಒಣಗಿ ತೊಗರು ಬಾನಿಯ ತಳದಲ್ಲಿ ಕೂತ ಗಶಿಯಂತೆ ಕಂಡಿತು. ಅದಕ್ಕೆ ನೀರು ಹಾಕಿ ಕರಡಿ ಕಲಾಕೃತಿಗೆ ಬಳಿದೆ. ತೀರೇ ಚೆಂದ ಕಾಣದಿದ್ದರೂ ತಕ್ಕಮಟ್ಟಿಗೆ ಗೋಡೆಗೆ ತೂಗು ಹಾಕಬಹುದು







ಯಕ್ಷಗಾನದ ಕಿರೀಟ ಯಾವತ್ತಿಗೂ ಒಂದು ಆಕರ್ಷಣೆಯ ಕಲಾಕೃತಿ ನನಗೆ. ಅದನ್ನು ಮಾಡುವ ಪ್ರಯತ್ನದಲ್ಲಿ ಬಾಶಿಂಗ ಮಾಡಿದೆ. ರಟ್ಟಿನ ಬಾಕ್ಸ್, ಪ್ಲಾಸ್ಟಿಕ್ ಕರಡಿಗೆ, ಕಾಗದ, ಹೊಳೆಯುವ ಬಟ್ಟೆ ಎಲ್ಲ ಉಪಯೋಗಿಸಿ ಕಿರೀಟದಂತಹ ಬಾಶಿಂಗವನ್ನೇನೋ ಮಾಡಿದೆ. ಆದರೆ ಕಿರೀಟದ ಮೇಲಿನ ಭಾಗದಲ್ಲಿ ಅಳವಡಿಸುವ ನವಿಲುಗರಿ ಹೇಗೆ ಹೊಂದಿಸಲಿ ಎಂದು ಯೋಚಿಸುತ್ತಿರುವಾಗ ಒಂದಷ್ಟು ನವಿಲುಗರಿಯನ್ನು ವಿನುತಾ ಕೊಟ್ಟಳು. ಅವಳು ಶಾಲೆಗೆ ಹೋಗುವಾಗ ಆರಿಸಿಟ್ಟ ನವಿಲುಗರಿಗಳಂತೆ. ವಯಸ್ಸಿನ ಪ್ರಭಾವವೋ, ಆನುವಂಶಿಕವೋ ಅಂತೂ ಹಲವು ನವಿಲುಗರಿಗಳು ಮುಪ್ಪಾಗಿದ್ದವು. ಕೊಟ್ಟಷ್ಟರಲ್ಲಿ ಮೂರು ಗರಿ ಉಪಯೋಗಕ್ಕೆ ಬಂತು. ಅಷ್ಟು ಸಾಲದಲ್ಲ, ಅದಕ್ಕೆ ಪ್ಲಾಸಿಕ್ ಪೊರಕೆಯ ಕಡ್ಡಿಗೆ ಬಣ್ಣ ಬಳಿದು ಕಿರೀಟಕ್ಕೆ ಸಿಕ್ಕಿಸಿದೆ. ನೋಡಿದರೆ ಗೊತ್ತಾಗುವುದಿಲ್ಲ, ಬಚಾವು






ಎತ್ತಿನ ಗಾಡಿ, ಊರ ಕಡೆಯ ಮನೆಯ ಪ್ರತಿಕೃತಿ ಹೀಗೆ ಏನೇನನ್ನೋ ಮಾಡಿದ್ದೇನೆ. ಇನ್ನೂ ಏನನ್ನಾದರೂ ಮಾಡುವ ಉಮೇದಿಯಲ್ಲಿಯೂ ಇದ್ದೇನೆ.



ಕಳೆದ ಕೆಲವು ದಿನಗಳಿಂದ ಚಿತ್ರ ಬಿಡಿಸುವ ನನ್ನ ಹಳೆಯ ಹವ್ಯಾಸಕ್ಕೆ ತಿರುಗಿದ್ದೇನೆ. ಪ್ರಾರಂಭಿಕ ಪ್ರಯತ್ನಗಳಿಂದ ತಿಳಿದಿರುವುದು "ಕಲಿಯುವುದು ಬಹಳಷ್ಟಿದೆ" ಎಂಬುದು. ಪ್ರಯತ್ನ ಸಾಗಿದೆ.




Thursday, March 9, 2017

ಶೃತ ನಮನ


ಸ್ವಲ್ಪ ದಿನದ ಹಿಂದೆ ಪಲ್ಲವಿ ಹೇಳಿದಳು, ಮಗನಿಗೆ ಶಾಲೆಯ ಪುಸ್ತಕಕ್ಕೆ ಬೈಂಡ್ ಹಾಕುವಾಗ "ಬಪ್ಪ"ನನ್ನ ರಾಶಿ ಮಿಸ್ ಮಾಡಿಕೊಂಡೆ ಎಂದು. ಅವಳಿಗೆ ಹಾಗನ್ನಿಸ್ಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ನಾವು ಶಾಲೆಗೆ ಹೋಗುವಾಗ ನಮ್ಮ ಪಟ್ಟಿ ಪುಸ್ತಕಗಳಿಗೆ ಹಳೆಯ ಕ್ಯಾಲೆಂಡರ್ ದಪ್ಪ ಹಾಳೆಯಲ್ಲಿ ಶಿಸ್ತಾಗಿ ಬೈಂಡ್ ಹಾಕಿ ಕೊಡುತ್ತಿದ್ದವನೇ ಪಲ್ಲವಿಯ "ಬಪ್ಪ" ಹಾಗು ನಮ್ಮನೆಯ ಅಜ್ಜ ಅಜ್ಜಿಯರನ್ನು ಬಿಟ್ಟರೆ ಉಳಿದವರೆಲ್ಲರಿಗೂ "ಅಣ್ಣ". ಹೌದು ನಾನು ಹೇಳುತ್ತಿರುವುದು ನನ್ನ ಅಪ್ಪನ ಸುದ್ದಿಯೇ. ಅದು ಹೇಗೋ ಅವನ ಮಕ್ಕಳಾದ ನಾವು ಮೂವರೂ ಅವನಿಗೆ "ಅಣ್ಣ" ಎಂದೇ ಕರೆಯುವುದು. ಹಳೆಯ ಕ್ಯಾಲೆಂಡರ್ಗಳನ್ನೂ, ದಪ್ಪ ಹಾಳೆಯ ಯಾವುದೇ ಪೇಪರ್ ಅನ್ನೂ ಬೈಂಡ್ ಹಾಕಲೆಂದೇ ಎತ್ತಿಟ್ಟು, ಬೇಸಿಗೆ ರಜೆ ಕಳೆದು ಶಾಲೆ ಪ್ರಾರಂಭವಾಗುವ ದಿನಗಳಲ್ಲಿ ಪಟ್ಟಿ ಪುಸ್ತಕಗಳಿಗೆ ಅಚ್ಚುಕಟ್ಟಾಗಿ ಬೈಂಡ್ ಹಾಕಿ ಕೊಡುತ್ತಿದ್ದುದಲ್ಲದೇ, ನಮಗೆ ಬೈಂಡ್ ಹಾಕುವುದು ಹೇಗೆ ಎಂದು ಹೇಳಿಕೊಟ್ಟ್ಟಿದ್ದ. ಬೈಂಡ್ ಹಾಕುವ ಅವನ ರೀತಿಯೋ, ಅವನು ಕೊಡುತ್ತಿದ್ದ ವಿವರಣೆಯೋ ಒಟ್ಟಿನಲ್ಲಿ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿದೆ.

ಅಣ್ಣನ ಹತ್ತಿರದಿಂದ ಒಡನಾಡಿದ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಅವನ ಪ್ರಭಾವ ಬಿದ್ದೆ ಬಿದ್ದಿರುತ್ತದೆ ಎಂಬುದು ನನ್ನ ಗಾಢವಾದ ನಂಬಿಕೆ. ಅವನನ್ನ ಹತ್ತಿರದಿಂದ ಬಲ್ಲವರೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನ ನೆನಪಿಸಿಕೊಳ್ಳದೆ ಇರಲಿಕ್ಕಿಲ್ಲ. ಅವನೇನೂ ಅಪ್ರತಿಮ ಮಾತುಗಾರನಾಗಿರಲಿಲ್ಲ, ತುಂಬಿದ ಹಾಸ್ಯ ಪ್ರಜ್ಞೆಯುಳ್ಳವನೂ ಆಗಿರಲಿಲ್ಲ, ಅಸಾಮಾನ್ಯ ಬುದ್ಧಿವಂತನೂ, ಮಹಾ ಪ್ರತಿಭಾ ಸಂಪನ್ನನೂ ಆಗಿರಲಿಲ್ಲ. ಆದರೆ ಅವನು ಜೀವನ ನಡೆಸಿದ ರೀತಿ, ಅವನ ಆಲೋಚನಾ ವಿಧಾನ, ನೈತಿಕತೆಗೆ ಕೊಡುತ್ತಿದ್ದ ಮಹತ್ವ ಹಾಗೂ ನೈತಿಕ ಜವಾಬ್ದಾರಿಯಿಂದ ಕೂಡಿದ ಬಾಳು ಎಂತವರನ್ನೂ ಪ್ರಭಾವಿಸಿದ್ದರಲ್ಲಿ ಆಶ್ಚರ್ಯವಿಲ್ಲ. ನಿಧಾನಿಯೂ, ಮಿತಭಾಷಿಯೂ, ಎಲ್ಲರನೂ,ಎಲ್ಲವನ್ನೂ ಪ್ರೀತಿಸುವವನೂ ಆದ ಅವನು ನನಗೆ ಆದರ್ಶಪ್ರಾಯ. ಆದರೆ ಅವನಂತೆ ಬದುಕುವುದು ಕಷ್ಟ.

ಅವನಿಗೆ ಸಿಟ್ಟು ಬಂದದ್ದನ್ನ ನಾನು ನೋಡಿಲ್ಲ. ಅವನ ಕೊನೆಯ ದಿನಗಳಲ್ಲಿ ಅವನಿಗೆ ವ್ಯಾಯಾಮ ಮಾಡಿಸುತ್ತಿದ್ದೇನೆಂದೋ, ಅವನಿಗೆ ಅನವಶ್ಯಕ ಪ್ರಶ್ನೆಗಳನ್ನು ಕೇಳಿ ಮಾತನಾಡಿಸಬೇಕೆಂದು ಪ್ರಯತ್ನಿಸುತ್ತಿದ್ದೇನೆಂದೋ ಸಿಟ್ಟು ಮಾಡಿದ್ದಿದೆ. ಆದರೆ ಅವನ ಚಟುವಟಿಕೆಯ ಜೀವನದಲ್ಲಿ ಸಿಟ್ಟನ್ನು ಬಹಳ ದೂರವಿಟ್ಟಿದ್ದ. ನನ್ನ ಸಿಟ್ಟು ಕಡಿಮೆಯಾಗಿದ್ದೆ ಆದರೆ ಅದಕ್ಕೆ ಅವನ ತಿದ್ದುವಿಕೆಯೇ ಕಾರಣ. ಕಾಗೆ ಕಾಲು ಗುಬ್ಬಿ ಕಾಲಿನಂತೆ ಇರುತ್ತಿದ್ದ ನನ್ನ ಹಸ್ತಾಕ್ಷರ ಸುಧಾರಿಸಲು ಅವನು ಮೂಲ ಕಾರಣ. ನಾನು ಬರೆಯುವಾಗ ನನ್ನ ಪಕ್ಕದಲ್ಲಿ ಕೂತು ಶಬ್ದಗಳ ಮಧ್ಯೆ ಜಾಗ ಬಿಡುವಂತೆಯೂ, ಅಕ್ಷರಗಳು ಸುಂದರವಾಗಿಯಲ್ಲದೆ ಹೋದರೂ ಸ್ಪಷ್ಟವಾಗಿರಬೇಕು ಎಂದು ತಿದ್ದುತ್ತಿದ್ದ. ಅವನು ಬಿಳಿ ಹಾಳೆಯ ಮೇಲೆ ಬರೆದರೆ ಅಕ್ಷರದ ಸಾಲು ಅಂಕು ಡೊಂಕಾಗಿರುತ್ತಿರಲಿಲ್ಲ, ಅವನು ಬರೆದಾದ ಮೇಲೆ ಅಕ್ಷರದ ಮೇಲೆ ಕೆಳಗೆ ಜೋಡುಗೆರೆ ಹಾಕಬಹುದಾದಷ್ಟು ಒಂದೇ ಅಗಲ ಎತ್ತರದ ಅಕ್ಷರಗಳುಸುಂದರವಾದ ದುಂಡಗಿನ ಅಕ್ಷರಗಳು. ಅವನ ಅಕ್ಷರದ ರೀತಿಯಲ್ಲೇ ಸುದರ್ಶನ ಅಣ್ಣಯ್ಯ, ಸುಧತ್ತೆ ಬರೆಯುತ್ತಾರೆ.
               
ಅಂಗಳ ಗುಡಿಸುವ ಪದ್ಧತಿ ಹೇಗೆ? ಅಡಿಕೆ ಹೆಕ್ಕುವ ಪರಿಪಾಠ ಹೇಗೆ? ಸಂನೆಂಪೊ ಕೊಯ್ಯುವುದು ಹೇಗೆ? ಹೇಳಿದರೆ ಕೆಲವರಿಗೆ ಅತಿಶಯೋಕ್ತಿ ಅನಿಸಬಹುದು, ಸಗಣಿಯಲ್ಲಿ ಸೇರಿರುವ ಹುಲ್ಲು ಬಿಡಿಸುವುದು ಹೇಗೆ? ಹಾಗೆ ಬೇರೆ ಮಾಡಿಕೊಂಡರೆ ಸಗಣಿ ಕರಡುವಾಗ ಎಷ್ಟು ಸಲೀಸಾಗುತ್ತದೆ, ಕಾಯಿ ಸುಲಿಯುವುದು ಹೇಗೆ? ಕಾಯಿಯ ಜುಟ್ಟನ್ನು ಹೇಗೆ ಬಿಡಿಸುವುದು ಹೀಗೆ ಏನೇನೆಲ್ಲ ಕಲಿಸಿಕೊಟ್ಟೆ ನೀನು. ಪಟ್ಟಿ ಮಾಡುತ್ತಾ ಹೋದರೆ ಮಾಡುತ್ತಾ ಹೋಗಬಹುದು.


ದಿನನಿತ್ಯದ ಜೀವನದಲ್ಲಿ, ಮಾಡುವ ಕೆಲಸಗಳಲ್ಲಿ ಅಣ್ಣಾ ನಿನ್ನ ನೆನಪುಗಳು ಹಾಸುಹೊಕ್ಕಾಗಿವೆ. ನಿನ್ನ ನೆನಪಾಗದ ದಿನಗಳಿಲ್ಲ. ಇನ್ನು ಆಯಿಯ ಪರಿಸ್ಥಿತಿ ಹೇಗಿರಬಹುದು? ಶಾರೀಕವಾಗಿ ನೀನಿಲ್ಲದಿದ್ದರೂ ಮಾನಸಿಕಾವಾಗಿ ನಿನ್ನ ಉಪಸ್ಥಿತಿ ನನ್ನಲ್ಲಿದೆ. ಆದರೂ ಅಣ್ಣಾ...

Tuesday, October 20, 2015

ಓದು!!

ನಮ್ಮನೆಗಿಂತ ಮೊದಲು ಟಿವಿ ಬಂದಿದ್ದು ಪಕ್ಕದಮನೆಯಲ್ಲಿ. ಹೊಸತರಲ್ಲಿ ಅದೇನು ಆಶ್ಚರ್ಯ, ಉತ್ಸಾಹ.. ಆಗ ಬರುತ್ತಿದ್ದದ್ದು ಡಿಡಿ೧ ಮಾತ್ರ. ಎತ್ತರದ ಮರದ ತುದಿಗೆ ಎಂಟೆನಾ ಕಟ್ಟಿದ್ದರು. ಸ್ವಲ್ಪ ಗಾಳಿ ಬೀಸಿದರೆ ಅದು ತಿರುಗಿ ಹೋಗುತ್ತಿತ್ತು. ಆಗ ಮರ ಹತ್ತಿ ಎಂಟೆನಾ ಸರಿ ಮಾಡಿ ಟಿವಿ ಯಲ್ಲಿ ಚಿತ್ರ ಬರುವಂತೆ ಮಾಡುವ ಪ್ರಹಸನ ಬಲು ಮಜವಾಗಿರುತ್ತಿತ್ತು. ಒಬ್ಬನು ಮರ ಹತ್ತಿ ಎಂಟೆನಾವನ್ನು ಸ್ವಲ್ಪ ಸ್ವಲ್ಪವಾಗಿ ತಿರುಗಿಸುತ್ತಾ ಹೋಗುವುದು, ಇನ್ನೊಬ್ಬವ ಟಿವಿ ಯಲ್ಲಿ ಚಿತ್ರ ಬರುತ್ತಿದೆಯಾ ಎಂದು ನೋಡಿ ಕೂಗಿ ಹೇಳುವುದು. ಮರದ ಮೆಲಿರುವವನ ಹಾಗು ಟಿವಿ ಮುಂದಿರುವವನ ಮದ್ಯೆ ಸಂವಹನ ನಡೆಸಲು ನಾಕಾರು ಹುಡುಗರು.

ಪ್ರತಿ ಆದಿತ್ಯವಾರ ಮದ್ಯಾಹ್ನದ ಮೇಲೆ ೪ ಗಂಟೆಗೆ ಕನ್ನಡ ಸಿನಿಮಾ ಬರುತ್ತಿತ್ತು. ಹಾಗಾಗಿ ಬೆಳಿಗ್ಗೆಯೇ ಮರ ಹತ್ತಿ ಎಂಟೆನಾವನ್ನು ಪರೀಕ್ಷಿಸಿ, ಟಿವಿಯಲ್ಲಿ ಚಿತ್ರ ಸರಿಯಾಗಿ ಬರುತ್ತಿರುವಂತೆ ನೋಡಿಕೊಳ್ಳುತ್ತಿದ್ದರು. ೪ ಗಂಟೆಗೆ ಸರಿಯಾಗಿ ಎರಡು ಮನೆಯ ಹುಡುಗರು, ಹೆಂಗಸರಾದಿಯಾಗಿ ಎಲ್ಲರು ಟಿವಿಯ ಮುಂದೆ ಹಾಜರು. ಪಕ್ಕದಮನೆಯ ಉದ್ದ ಜಗುಲಿಯ ತುಂಬಾ ಜನರು. ಮುಂದೆ ಕುಳಿತ ಹುಡುಗರ ಗಲಾಟೆಯಲ್ಲಿ, ಹೆಂಗಸರ ಸುದ್ದಿಯ ಗೌಜಿನ ಮಧ್ಯೆ ಹಿಂದೆ ಇದ್ದವರು ಚಿತ್ರ ನೋಡುವುದೊಂದೇ ಆಗುತ್ತಿತ್ತು. ಆದಿತ್ಯವಾರ ಬಂತೆಂದರೆ ಸಿನಿಮಾ ನೋಡುವ ಉತ್ಸಾಹ ಈಗ ಸೋಜಿಗವೆನಿಸುತ್ತದೆ.

ಭಾರತದಲ್ಲಿ ನಡೆಯುವ ಕ್ರಿಕೆಟ್ ಮ್ಯಾಚ್ಗಳನ್ನು ಡಿ ಡಿ ೧ ರಲ್ಲಿ ನೋಡಬಹುದಾಗಿತ್ತು. ಅದ್ಯಾವುದೋ ಮಾಯದಲ್ಲಿ ಮ್ಯಾಚ್ ಇದ್ದ ದಿನ ಎಂಟೆನಾ ತಿರುಗಿಯೇ ಹೋಗುತ್ತಿತ್ತು. ಎಂಟೆನಾ ಸರಿ ಮಾಡುವ ಪ್ರಹಸನದ ನಂತರ ಎಲ್ಲರೂ ಒಟ್ಟಾಗಿ ಮ್ಯಾಚ್ ನೋಡುವುದೇ ಒಂದು ಸುಂದರ ಅನುಭವ. ನಾಗವಳ್ಳಿ ಎಲೆಯ ರಸಗವಳ ಬಾಯಿ ತುಂಬಿ ಹೋದರೂ ತುಪ್ಪಲು ಎದ್ದುಹೊದರೆ ಕುಳಿತಿರುವ ಜಾಗವನ್ನು ಇನ್ನೊಬ್ಬರು ಒಬಳಿಸಿಯಾರು ಎಂದು ಕುಳಿತಲ್ಲಿಂದ ಹಂದಾಡುತ್ತಿರಲಿಲ್ಲ ಚಿಕ್ಕಪ್ಪಂದಿರು. ಅದ್ಯಾವುದೋ ಪಾಕಿಸ್ತಾನದ ವಿರುದ್ಧದ ಮ್ಯಾಚ್ ನಲ್ಲಿ ಭಾರತ ಗೆದ್ದಾಗ ಚಿಕ್ಕಪ್ಪನೊಬ್ಬ ಜಾಗಟೆ ಬಾರಿಸಿ ಅಜ್ಜನಿಂದ ಬೈಸಿಕೊಂಡಿದ್ದ.

ನಮ್ಮನೆಯಲ್ಲಿ ಟಿವಿ ಬರುವವರುಗೂ ಪಕ್ಕದಮನೆಯಲ್ಲಿ ನೋಡುತ್ತಿದ್ದೆ. ನಮ್ಮನೆಗೆ ಟಿವಿ ಬಂದಮೇಲೆ ಟಿವಿಯ ಹುಚ್ಚು ಜೋರಾಯಿತು. ಶಾಲೆಯಿಂದ ಬರುತ್ತಿದ್ದಂತೆ ಸಾಧನೆ ಎಂಬ ಧಾರವಾಹಿ ನೋಡುತ್ತಿದ್ದೆ. ಹೀಗೆ ಟಿವಿಯಲ್ಲಿ ಏನೇನು ಬರುತ್ತಿತೋ ಎಲ್ಲವನ್ನು ನೋಡುತ್ತಿದ್ದೆ. ನನ್ನ ಟಿವಿ ಹುಚ್ಚನ್ನು ನೋಡಿದ "ಅಣ್ಣ" ನನಗೆ ತಿಳಿ ಹೇಳಲು ಪ್ರಾರಂಭಿಸಿದ. ಸುಮ್ಮನೆ ಟಿವಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನೋಡಬೇಡ. ಚೆನ್ನಾಗಿರುವ ಒಂದೋ ಎರಡೋ ಕಾರ್ಯಕ್ರಮಗಳನ್ನು ನೋಡು. ಟಿವಿ ನೋಡುವ ಸಮಯದಲ್ಲಿ ಏನಾದರೂ ಓದು. ಓದುವುದರಿಂದ ಏನೋ ವಿಷಯ ತಿಳಿಯುತ್ತದೆ. ದಿನಪತ್ರಿಕೆಯಾದರೂ ಸರಿ, ಸುಧಾ ತರಂಗ ಗಳಾದರೂ ಸರಿ ಒಟ್ಟಿನಲ್ಲಿ ಓದು. ಎಂದು ನನಗೆ ಹೇಳಿ ಹೇಳಿ ನನ್ನ ಟಿವಿಯ ಹುಚ್ಚನ್ನು ಕಡಿಮೆ ಮಾಡಿ ಓದುವ ಹವ್ಯಾಸವನ್ನು ಅಭ್ಯಾಸ ಮಾಡಿಸಿದ್ದೆ ಅವಾ.

ಅವನು ದಿನಾ ಪೇಪರ್ ಓದುವುದನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಮೊದಲ ಅಕ್ಷರದಿಂದ ಹಿಡಿದು ಕೊನೆಯ ಅಕ್ಷರದವರೆಗೂ ಓದುತ್ತಿದ್ದ. ನಮ್ಮನೆಯಲ್ಲಿ ಒಟ್ಟು ಕುಟುಂಬವಾಗಿದ್ದರಿಂದ ಅವನ ಕೈಗೆ ಅವತ್ತಿನ ಪೇಪರ್ ಮರುದಿನ ಸಿಗುತ್ತಿತ್ತು. ಹಾಗಾಗಿ ಅವನು ಪ್ರತಿದಿನ ಹಿಂದಿನ ದಿನದ ಪೇಪರ್ ಓದುತ್ತಿದ್ದ. ನಾನು ಕಾಲೇಜ್ಗೆ ಹೋಗುವಾಗ ಲೈಬ್ರರಿಯಿಂದ ಕಾದಂಬರಿಗಳನ್ನು ತಂದು ಓದುತ್ತಿದ್ದೆ. ಎಷ್ಟೋ ಕಾದಂಬರಿಗಳನ್ನು ಅವನೂ ಓದುತ್ತಿದ್ದ. ಓದುವುದರ ಮಹತ್ವ ಗೊತ್ತಿದ್ದ ಅವನು ಅಜ್ಜನ ಕೊನೆಯ ಕಾಲದಲ್ಲಿ, ಹಾಸಿಗೆಯ ಮೇಲೇ ಇರುತ್ತಿದ ಅಜ್ಜನ ಹತ್ತಿರ ಏನಾದರೂ ಓದಲು ಹೇಳುತ್ತಿದ್ದ.

ಈಗ ಅವನಿಗೇ ಓದುವ ಮನಸ್ಸಿಲ್ಲ...

Sunday, April 5, 2015

ಹಾವಿನ ಪ್ರಹಸನ

ಮಳೆ ನಾಡಿನಲ್ಲಿ ಹಾವುಗಳಿಗೆ ಬರಗಾಲವೇ? ನಾನಾ ತರಹದ ಹಾವುಗಳನ್ನು ಅಲ್ಲಿ ನೋಡಬಹುದು. ಗಿಡಗಳಮೇಲೆ ಎಲೆಯಬಣ್ಣ ಇರುವ ಹಸುರು ಹಾವು, ಕೊಳೆಯುವ ವಿಷವಿರುವ ಕುದುರ್ಬೆಳ್ಳ, ಗೋಧಿ ಬಣ್ಣದಲ್ಲಿ ಸುಂದರವಾಗಿರುವ ಸರ್ಪ ಹೀಗೆ ಅನೇಕ ಜಾತಿಯ ಹಾವುಗಳು ಅಲ್ಲಿವೆ. ಕೆರೆ ಹಾವುಗಳಿಗಂತೂ ಬರಗಾಲವೇ ಇಲ್ಲ.

ನನ್ನ ವಾರಗೆಯ ನಮ್ಮೂರಿನ ಇಬ್ಬರಿಗೆ ಹಾವುಗಳೆಂದರೆ ವಿಪರೀತ ಹೆದರಿಕೆ. ಮಳೆ ನಾಡಿನವರಾದರೂ ಅಷ್ಟೊಂದು ಹೇಗೆ ಹೆದರುತ್ತಾರೋ ಗೊತ್ತಿಲ್ಲ. ಹಾವುಗಳು ಯಾವುದಕ್ಕೂ ಬೇಕಾಗದ ಅನವಶ್ಯಕ ಜೀವಜಂತುಗಳೆಂದು ಅವರಿಬ್ಬರೂ ಠರಾವು ಪಾಸು ಮಾಡಿಯಾಗಿದೆ. ಹಾವು ಎಂದರೆ ಸಾಕು ಎಲ್ಲಿ ಎಂದು ಕೇಳುತ್ತ ಮೂರು ತುಂಡುಗುಪ್ಪಣ ಹೊಡೆಯುತ್ತಾರೆ.

ಇದೇ ತರಹ ಹೆದರುಪುಕ್ಕಲನಾದ ಪಕ್ಕದಮನೆಯ ಚಿಕ್ಕಪ್ಪನ ಮನೆಗೆ ಒಮ್ಮೆ ಹಾವು ಬಂದಿತ್ತು. ಪಕ್ಕದೂರಿನಲ್ಲಿ ಒಮ್ಮೆ ಕಾಳಿಂಗ ಬಂದಾಗ ಅಜಮಾಸು ನಾಲ್ಕು ಫರ್ಲಾಂಗು ದೂರ ನಿಂತುಕೊಂಡೇ ಕೂಗಿದ ಅಸಾಮಿ ಆವಾ. ಹಳೆಯ ಕಾಲದ ಮಣ್ಣು ಗೋಡೆಯ ದೇವರ ಮನೆಯೊಳಗೆ ದೊಡ್ಡ ದೇವರ ಪೀಠ ಇದೆ. ಆ ದೇವರ ಪೀಠಕ್ಕೂ ಗೋಡೆಗೂ ಮದ್ಯೆ ಇರುವ ಸಂದಿನಲ್ಲಿ ಯಾವುದೋ ಹೊಸ ಜಾತಿಯ ಹಾವು ಸೇರಿಕೊಂಡಿತ್ತು. ಹಗಲಿನಲ್ಲೂ ಬೆಳಕಿನ ಸೆಲೆ ಇಲ್ಲದ ದೇವರ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಚಿಕ್ಕಪ್ಪನಿಗೆ ಹಾವು ಕಣ್ಣಿಗೆ ಬಿತ್ತು. ಅರ್ಧಂಬರ್ಧ ಬಿಚ್ಚಿದ ಮಡಿಯೊಳಗೆ ಹೊರಗೆ ಓಡಿ ಬಂದು ಹಾವು ಹಾವು ಎಂದು ಕಿರುಚಿದಕೂಡಲೇ ಹೆಚ್ಚಿನ ಜನರು ಯಾವುದೋ ಕೆರೆ ಹಾವು ನೋಡಿ ಹೆದರಿದ್ದಾನೆ ಎಂದೇ ಭಾವಿಸಿದರು.

ಅವನ ಸಮಾಧಾನಕ್ಕೋಸ್ಕರ ನಾನು ಮತ್ತಿಬ್ಬರು ಚಿಕ್ಕಪ್ಪಂದಿರು ಪವರ್ ಫುಲ್ ಬ್ಯಾಟರಿ ತೆಗೆದುಕೊಂಡು ದೇವರ ಮನೆಗೆ ಹೋಗಿ ಹಾವನ್ನು ಹುಡುಕಿದಾಗ ಕಂಡಿತು. ಏನೇ ಸಪ್ಪಳ ಮಾಡಿದರೂ ಸಂದಿಯಿಂದ ಹೊರಗೆ ಬರುತ್ತಿರಲಿಲ್ಲ. ಹೊಸ ಜಾತಿಯ ಹಾವಾಗಿದ್ದರಿಂದ ಯಾರೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ತೀರ್ಮಾನವಾಗಿ ಅದನ್ನು ಹೊರಗೆ ಹಾಕುವುದು ಹೇಗೆ ಎಂಬ ಸಮಸ್ಯೆಗೆ ಎಲ್ಲರಿಗೂ ನೆನಪಾಗಿದ್ದು ಮಂಜಣ್ಣ.

ಮಂಜಣ್ಣ ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ. ಅಮಾವಾಸ್ಯೆಯ ಕತ್ತಲಿನಲ್ಲೂ ಕೈಯಲ್ಲಿ ಬ್ಯಾಟರಿ ಇದ್ದರೂ ಕಪ್ಪಿನಲ್ಲೇ ನಡೆದುಕೊಂಡು ಹೋಗುವಂತ ಧೈರ್ಯವಂತ. ಅವನಿಗೆ ಫೋನಾಯಿಸಿದಾಗ ಬರುತ್ತೇನೆಂದ. ಅವನು ಬರುವ ವರೆಗೆ ಹಾವು ಅಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅದೇನಾದರೂ ಅಲ್ಲಿಂದ ಹೊರಬಿದ್ದು ನಾಗಂತಿಕೆ ಮೇಲಿದ್ದ ಕರಡಿಗೆಗಳ ಮಧ್ಯೆ ಸೇರಿಕೊಂಡು ಬಿಟ್ಟಿತೆಂದರೆ ಅದನ್ನು ಹುಡುಕುವುದು ಹವ್ಯಕ ಮಾಣಿಗೆ ಕೂಸು ಹುಡುಕುವುದಕ್ಕಿಂತ ಕಷ್ಟ. ಎಲ್ಲರೂ ಸೇರಿ ನನಗೆ ಸಂದಿಯಲ್ಲಿ ಬ್ಯಾಟರಿ ಬಿಟ್ಟು ಬೆಳಕು ಮಾಡಿಕೊಂಡಿರು ಎಂದು ಹುಕುಂ ಮಾಡಿದರು. ನನಗೆ ಏಕೆ ಹೇಳಿದರೆಂದರೆ ಅವರ್ಯಾರಿಗೂ ಅಲ್ಲಿ ನಿಂತುಕೊಳ್ಳುವಷ್ಟು ಧೈರ್ಯವಿರಲಿಲ್ಲ.

ಮಂಜಣ್ಣ ಬಂದವನೇ ಹಾವನ್ನು ನೋಡಿ "ಊ ಹು" ಎಂಬ ಉದ್ಗಾರ ತೆಗೆದ. ಅವನ ಅದ್ಗಾರಗಳಿಗೆ ಅವನೇ ಅರ್ಥ ಹೇಳಬೇಕು. ಅದೊಂದು ವಿಷವಿಲ್ಲದ ಸಾಮಾನ್ಯ ಹಾವು ಎಂದು ಆ ಉದ್ಗಾರವೋ ಅಥವಾ ಅದು ಭಯಂಕರ ವಿಷವಿರುವ ಕಾರ್ಕೋಟಕ ಎಂದು ಆ ಉದ್ಗಾರವೋ ನರ ಮನುಷ್ಯರಾದ ನಮಗೆ ಹೇಗೆ ತಿಳಿಯಬೇಕು. ಅಡುಗೆ ಮನೆಗೆ ಹೋಗಿ ಇಕ್ಕಳ ತೆಗೆದುಕೊಂಡು ಬಂದು "ನಾನು ಹಾವನ್ನು ಸಂದಿಯಿಂದ ಜಗ್ಗಿ ತೆಗೆಯುತ್ತೇನೆ. ನೀವು ದೊಣ್ಣೆಯಿಂದ ಜಪ್ಪಿ ಸಾಯಿಸಿರಿ" ಎಂದ. ನಾವು ಮೂವರೂ ಕೈಯಲ್ಲಿ ಒಂದೊಂದು ದೊಣ್ಣೆ ಹಿಡಿದುಕೊಂಡು ತಯಾರಾಗಿ ನಿಂತೆವು. ಮಂಜಣ್ಣನು ಇಕ್ಕಳವನ್ನು ಸಂದಿಯ ಹತ್ತಿರ ತೆಗೆದುಕೊಂಡು ಹೋಗಿದ್ದೇ ತಡ ದೊಣ್ಣೆ ಹಿಡಿದಿದ್ದ ಇಬ್ಬರೂ ಶೀದ ಅಂಗಳದಲ್ಲಿ. ಸಂದಿಯಿಂದ ಹಾವನ್ನು ಹೊರಗೆ ಎಳೆದು ನೆಲದ ಮೇಲೆ ಹಾಕಿ, ಮಂಜಣ್ಣನೂ ಒಂದು ದೊಣ್ಣೆ ತೆಗೆದುಕೊಂಡು ಹಾವನ್ನು ಜಪ್ಪಿದ. ನಾವಿಬ್ಬರೂ ಹಾವನ್ನು
ಸಾಯಿಸಿದಮೇಲೆ ಮಂಜಣ್ಣ ದೊಣ್ಣೆಯಲ್ಲಿ ಹಾವನ್ನು ಹೊರಗೆ ತೆಗೆದುಕೊಂಡು ಹೋದಮೇಲೆ ಚಿಕ್ಕಪ್ಪಂದಿರು ಸಹಜವಾಗಿ ಉಸಿರಾಡಿದರು. ಅದು ಯಾವ ಜಾತಿಯ ಹಾವು ಎಂದು ಕೇಳಿದ್ದಕ್ಕೆ "ಸುರಗನ್ದಡಿಯ" ಎಂದು ಹೇಳಿದ ಮಂಜಣ್ಣ. ನಾನು ಮೊದಲ ಬಾರಿಗೆ ಆ ಹೆಸರನ್ನು ಕೇಳಿದ್ದೆ. ಮರುದಿನದಿಂದ ಪೂಜೆಗೆ ಕುಳಿತುಕೊಳ್ಳುವಾಗ ದೊಡ್ಡ ಗ್ಯಾಸ್ ಲೈಟ್ ಹಚ್ಚಿಕೊಂಡೆ ಕುಳಿತುಕೊಳ್ಳುತಿದ್ದ ಚಿಕ್ಕಪ್ಪ. ಅವನ ಹೆದರಿಕೆಗೆ ಯಾರೂ ಅರ್ಧ ಅಡಕೆಯ ಕಿಮ್ಮತ್ತೂ ಕೊಡಲಿಲ್ಲ.

Tuesday, November 18, 2014

ಕರೆಯದ ತಿರುಗಾಟ

ಮಂಗಳ ಕಾರ್ಯಗಳಿಗೆ ಬಂಧು ಬಳಗವನ್ನು ಆಮಂತ್ರಿಸಲು ಹೋಗುವುದೂ ಒಂದು ಜೀವನಾನುಭವ! ಬಹಳ ಸರ್ತಿ ನಾನು ಈ ಜೀವನಾನುಭವವನ್ನು ಅನುಭವಿಸಿದ್ದಿದೆ. ಅದರ ಮಜವೇ ಬೇರೆ. ಯಾರಲ್ಲೋ ದಾರಿ ಕೇಳುವುದು, ಮನೆಯನ್ನು ಹುಡುಕಿಕೊಂಡು ಹೋಗುವುದು, ಹೋದ ಮನೆಯಲ್ಲಿ ನಮ್ಮ ಪರಿಚಯ ಹೇಳಿಕೊಳ್ಳುವುದು, ಅಲ್ಲಿ ಆಸರಿಗೆ ಊಟ ಮಾಡುವುದು ಎಲ್ಲವೂ ಒಂದೊಂದು ನಮೂನೆಗಳೇ. ಅದರಲ್ಲೂ ಕೆಲವು ಪ್ರಸಂಗಗಳು ಮೆಲುಕು ಹಾಕಿದಷ್ಟೂ ಸ್ವಾರಸ್ಯವಾಗುತ್ತಾ ಹೋಗುತ್ತವೆ.

ಮನೆಯವರು ಕೂತು ಬಳಗದ ಲಿಸ್ಟ್ ಮಾಡಿ ಕೊಡುತ್ತಾರೆ. ಅದರಲ್ಲಿ ನಮಗೆ ಪರಿಚಯ ಇರುವ ನೆಂಟರು ಬಹಳ ಕಡಿಮೆ. ಸಂಬಂಧಗಳ ಬಾವಿಯಲ್ಲಿ ಆಳಕ್ಕೆ ಇಳಿದು ದೂರ ದೂರದ ನೆಂಟರನ್ನೂ ನೆನಪು ಮಾಡಿಕೊಂಡು ಹೆಕ್ಕಿ ತೆಗೆದು ಬರೆದು ಕೊಟ್ಟಿರುತ್ತಾರೆ. ಏನಾದರೂ ಇವರು ನಮಗೆ ಹೇಗೆ ಸಂಬಂಧ ಎಂದು ಕೇಳಿದರೆ ಮುಗಿಯಿತು, ಅವರ ವಂಶವ್ರಕ್ಷವನ್ನೇ ನಮ್ಮ ಕಣ್ಣೆದುರು ಹಿಡಿದು ಅದನ್ನು ನಮ್ಮ ಮನೆಯ ವಂಶವ್ರಕ್ಷಕ್ಕೆ ತಳಿಕೆ ಹಾಕಿ ಆಧ್ಯಾತ್ಮದ ಚಿಂತನೆ ಮಾಡುವ ಅನಿವಾರ್ಯತೆ ತಂದೊಡ್ಡುತ್ತಾರೆ. ಇದು ಬಿಡಿ. ಕೆಲವು ಸಲ ನಾವು ಹೋದ ಮನೆಯವರಿಗೇ ಇವ ಅದು ಹೇಗೆ ನಮಗೆ ಸಂಬಂಧ ಎಂಬುದು ತಿಳಿಯುವುದಿಲ್ಲ.

ಗೊತ್ತಿಲ್ಲದ ಮನೆಗೆ ದಾರಿಯನ್ನು ಕೇಳುತ್ತಲೇ ಹೋಗಬೇಕು. ಕೆಲವೊಮ್ಮೆ ಕೆಲವರು ದಾರಿ ಹೇಳುವ ಮೊದಲು ನಮ್ಮ ಮನೆಯ ವಿವರ ಕೇಳುತ್ತಾರೆ. ಅದನ್ನು ಕೇಳುತ್ತಲೇ "ಓ ನೀನು ಅವನ ಮಗನ? ಅವ ನನ್ನ ನಾದಿನಿಯ ಷಡಕ ಆಗ್ತಾ" ಎಂದೋ ಅಥವಾ "ನನ್ನ ಷಡಕನ ಅಜ್ಜನ ಮನೆ ನಿನ್ನ ಅಪ್ಪನ ಅಜ್ಜನ ಮನೆ ಎರಡು ಒಂದೆಯಾ" ಎಂದೋ ಹೇಳಿ ಅವರ ಮನೆಗೆ ಕರೆದೊಯ್ಯುತ್ತಾರೆ. ಅಲ್ಲಿ ಆಸರಿಗೆ ಕುಡಿದು ಮಂಗಳ ಕಾರ್ಯಕ್ಕೆ ಆಮಂತ್ರಿಸಿ ಹೊರಟು ಹೋದಮೇಲೆ ತಿಳಿಯುತ್ತದೆ, ನಮ್ಮ ಲಿಸ್ಟಿನಲ್ಲಿ ಅವರ ಹೆಸರೇ ಇಲ್ಲ ಎಂಬುದು.

ಹೋದ ಎಲ್ಲ ಮನೆಗಳಲ್ಲೂ ಆಸರಿಗೆ ಕುಡಿಯಲೇ ಬೇಕು. ಯಾವ ಮನೆಯವರೂ ಹಾಗೆ ಕಳುಹಿಸುವುದಿಲ್ಲ. ನಮಗೆ ಬೇಕೋ ಬೇಡವೋ ಅನ್ನುವುದು ಲೆಕ್ಕಕ್ಕೆ ಇಲ್ಲ. ತುಂಬಾ ಕಡೆ ಆಸರಿಗೆ ಆಗಿದೆ ಅಂದರೆ ಅವಷ್ಟರ ಜೊತೆ ಇನ್ನೊಂದು ಅರ್ದ ಕಪ್ ಚಹ ಹೆಚ್ಚಲ್ಲ ಎಂದು ಕುಡಿಸಿಯೇ ಕಳುಹಿಸುತ್ತಾರೆ. ನಮ್ಮ ಗ್ರಹಚಾರ ಸರಿ ಇಲ್ಲದಿದರೆ ಕೆಲವರು ರವೆ ಶಿರ ಕಾಯಿಸಿ ಬಡಿಸುತ್ತಾರೆ. ಇಂತಹ ಆಸರಿಗೆಗಳ ಮಧ್ಯೆ ಊಟ ಮಾಡಲಾಗುವುದೇ? ಮಧ್ಯಾಹ್ನದ ಹೊತ್ತಲ್ಲಿ ಖಾಲಿ ಬಸ್ ಸ್ಟಾಪ್ ನಲ್ಲೋ ಅಥವಾ ಶಾಲೆ ಮನೆಯ ವರಾಂಡದಲ್ಲೋ ಕುಳಿತು ಊಟದ ಹೊತ್ತು ಮೀರಿದ ಮೇಲೆ ಮುಂದಿನ ಮನಗೆ ಹೋಗಿದ್ದಿದೆ. ಸತತ ಮೂರನೆ ದಿನ ಇಂತಹ ತಿರುಗಾಟದ ಪರಿಣಾಮ ಹೊಳೆ ಕಂಡಲ್ಲೆಲ್ಲ ಬೈಕ್ ನಿಲ್ಲಿಸುವ ತಾಪತ್ರಯವಗಿತ್ತು.

ಸಮಯದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವ ಉದ್ದೇಶದಲ್ಲಿ ಬೈಕನ್ನು ಜೋರಾಗಿ ಬಿಡುತ್ತಿದ್ದ ನನ್ನ ಜೋಸ್ತನಿಗೆ "ಟೊಪ್ಪಿ ಜಾರಿ ಹೋಯಿತು" ಎಂದು ಹೇಳಿದ್ದು "ದಾರಿ ತಪ್ಪಿ ಹೋಯಿತು" ಎಂದು ಕೇಳಿ ದೊಡ್ಡ ಭಾನಗಡೆಯೇ ಆಗಿತ್ತು. ಆಸರಿಗೆಯ ಹೊಡೆತ ತಪ್ಪಿಸಿಕೊಳ್ಳಲು ಒಬ್ಬರನ್ನು ಬೈಕಿನ ಹತ್ತಿರವೇ ನಿಲ್ಲಿಸಿ, ಅವನನ್ನು ಬಾಡಿಗೆ ಬೈಕಿನವ ಎಂದು ಹೇಳಿದ್ದೂ ಇದೆ. ಕಾರ್ಯಕ್ಕೆ ಎಲ್ಲರನ್ನೂ ಕರೆದೂ ಕರೆದು ಅದೆಷ್ಟು ಅಭ್ಯಾಸವಾಗುತ್ತದೆ ಅಂದರೆ ಯಾರಲ್ಲೋ ದಾರಿ ಕೇಳಿ ಅವನ ಹತ್ತಿರವೂ "ಬನ್ನಿ ನಮ್ಮ ಮನೆಗೆ" ಎಂದು ಕರೆದದ್ದೂ ಇದೆ. ಆಶ್ಚರ್ಯ ಇದಲ್ಲ. ದಾರಿ ಹೇಳಿದವನೂ ಸಹ "ಅಡ್ಡಿಲ್ಲೆ, ನೀವೂ ಬನ್ನಿ" ಅಂದಿದ್ದು.

ಒಂದು ಮನೆಯಲ್ಲಿ ಆಸರಿಗೆ ಕುಡಿದು ಕೈ ತೊಳೆದು ಹೊರಗೆ ಬರುತ್ತಿರುವಾಗ ಹಾಸಗೆಯಲ್ಲಿ ಮಲಗಿದ್ದ ಅಜ್ಜಿಯೊಬ್ಬಳು ಬಂದವರು ಯಾರು ಎಂದು ಕೇಳಿದಳು. ನಾನು ಸಹಜವಾಗಿಯೇ ನಮ್ಮನೆಯ ಹೆಸರು ಹೇಳಿದೆ. ಆಗ ಕಷ್ಟಪಟ್ಟು ಎದ್ದು ಕುಳಿತ ಅವಳು "ನೀನು ಗಪ್ಪಿಯ ಮೊಮ್ಮಗನ?" ಎಂದು ಕೇಳಿ, ಹತ್ತಿರ ಕೂರಿಸಿಕೊಂಡು ತಲೆ ನೆವರಿಸಿದ್ದಳು. ಒಮ್ಮೆ ನೋಡಿದರೂ ನೆನಪಿಟ್ಟುಕೊಂಡು ಆಮೇಲೆ ಎಲ್ಲಿ ಸಿಕ್ಕಿದರೂ ಪ್ರೀತಿಯಿಂದ ಮಾತನಾಡಿಸುವ ಜನರು ಬಹಳ.

ಕರೆಯದ ಈ ತಿರುಗಾಟದಲ್ಲಿ ಚಿಕ್ಕ ಪುಟ್ಟ ತೊಂದರೆ ಇದ್ದರೂ ಹೊಸ ಜನರನ್ನು, ಊರನ್ನು ನೋಡುವ ಅವಕಾಶ ಸಿಗುತ್ತದೆ. ಅದೃಷ್ಟ ಚೆನ್ನಾಗಿದ್ದರೆ ಮುಂದೆ ಯಾವಾಗಲಾದರೂ ಅವರಲ್ಲಿ ಕೆಲವರ ಕವನವನ್ನೂ ಒದಲೂಬಹುದು.


Friday, January 24, 2014

ಅರವಿಂದ

               ಇವತ್ತು ಬೆಳಿಗ್ಗೆ ಕೇಳಿದ ಸುದ್ದಿ ತುಂಬಾ ಅಘಾತಕಾರಿಯಾಗಿತ್ತು. ನನಗಿಂತ ಮೂರು ವರ್ಷ ಹಿರಿಯವನಾದ ಅರವಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಅರವಿಂದನಂತಹ ಮನುಷ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನುವುದು ಸುಲಭಕ್ಕೆ ನಂಬಲಿಕ್ಕೆ ಆಗದಂತಹ ವಿಷಯ. ಅವನನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅಘಾತವಾಗದಿರದು. ತುಂಬಾ ಗಟ್ಟಿ ಮನಸ್ಸಿನ, ಛಲವಿರುವ, ಜೀವನ ಪ್ರೀತಿಯಿದ್ದ ಮನುಷ್ಯ. ಆತ್ಮಹತ್ಯೆ ಮಾಡಿಕೊಳ್ಳುವಸ್ಟು ದುರ್ಬಲನಾಗಿರಲಿಲ್ಲ. ಕೊನೇಪಕ್ಷ ನಾನು ಅವನನ್ನು ನೋಡುತ್ತಿರುವವರೆಗೂ ದುರ್ಬಲನಾಗಿರಲಿಲ್ಲ.

         ಅರವಿಂದನೆಡೆಗೆ ಒಂದು ತೆರನಾದ ಗೌರವವಿತ್ತು. ನನ್ನ ಅಣ್ಣನ ಸಹವರ್ತಿಯಾಗಿದ್ದ ಅವನು ನಾನು ಚಿಕ್ಕವನಿದ್ದಾಗಿಂದಲೂ ಒಡನಾಟಕ್ಕೆ ಸಿಗುತ್ತಿದ್ದ. ಓದಿನಲ್ಲಿ ಚುರುಕಾಗಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಪಿ ಯು ಸಿ ಗೆ ಓದನ್ನು ನಿಲ್ಲಿಸಿದ್ದ. ಹೈ ಸ್ಕೂಲ್ ನಲ್ಲಿ ಓದಿನ ಜೊತೆಗೆ ಉಳಿದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಚದುರಂಗ ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿದ್ದ. ಆ ಆಟದ ಆಸಕ್ತಿ ಅವನಿಗೆ ಈಗಲೂ ಇತ್ತು ಎಂಬುದು ಅವನ ಫೇಸ್ಬುಕ್ ಫೋಟೋ ಗಳಿಂದ ತಿಳಿದಿತ್ತು.

            ಚಿಕ್ಕವನಿರುವಾಗ ಉರವರು ಯಾರು ಯಾರನ್ನೋ ನಮಗೆ ಉದಾಹರಿಸಿ "ಅವನನ್ನು ನೋಡಿ ಕಲಿಯಿರಿ" ಎನ್ನುತ್ತಿದ್ದರು. ಅವರೋ ತಾನು ಊರಿನಿಂದ ಹೊರಗಿರುವುದರಿಂದ ಮನೆಯ ಅಂಗಳಕ್ಕಿಳಿಯಬೇಕಾದರೂ ಚಪ್ಪಲಿ ಮೆಟ್ಟಿ ಇಳಿಯುತ್ತಿದ್ದವರು. ತಮ್ಮನ್ನು ತಾವು ಏನಂದುಕೊಂಡಿದ್ದರೋ ಗೊತ್ತಿಲ್ಲ, ಸಿಕ್ಕಾಗ ತುಂಬಾ ವ್ಯಂಗ್ಯವಾಗಿ ಮಾತನಾಡುತ್ತಿದ್ದರು. ಅರವಿಂದನು ಕಷ್ಟಪಟ್ಟು ಹಂತ ಹಂತವಾಗಿ ಸಾಧಿಸಿದ್ದ ಯಶಸ್ಸು ಊರವರ ಕಣ್ಣಿಗೆ ಬೀಳಲಿಲ್ಲ. ಹಾಲಿನ ಡೈರಿಯಲ್ಲಿ ಕುಳಿತುಕೊಂಡು ಊದಿನಕಡ್ಡಿ, ಕರ್ಪೂರಗಳನ್ನು ಮಾರುವುದರಿಂದ ತನ್ನ ವ್ಯಾವಹಾರಿಕ ಬದುಕನ್ನು ಪ್ರಾರಂಭಿಸಿದ್ದ. ನಂತರ ಅಡಿಕೆ ವ್ಯಾಪಾರಿಯಾಗಿದ್ದ ಚಿಕ್ಕಪ್ಪನಿಂದ ಹಣವನ್ನು ಎರವಲು ಪಡೆದುಕೊಂಡು ಚಿಕ್ಕದಾಗಿ ಕೊಳೆ ಅಡಿಕೆ ವ್ಯಾಪಾರ ಪ್ರಾರಂಭಿಸಿದ. ಊರಿನ ಪ್ರತಿ ಮನೆಯ ಬಾಗಿಲಿಗೂ ಹೋಗಿ ಚೌಕಾಸಿ ಮಾಡಿ ಕೊಳೆ ಅಡಿಕೆ ಕೊಳ್ಳುತ್ತಿದ್ದ. ಊರವರು ಅವನ ಚೌಕಾಸಿಗೆ ಬಯ್ದರೂ ರೆವನಕಟ್ಟೆ ವ್ಯಾಪಾರಿಗಳಿಗೆ ಕೊಳೆ ಅಡಿಕೆ ಕೊಡದೇ ಅರವಿಂದನಿಗೆ ಕೊಡುತ್ತಿದ್ದರು.

                ಕೊಳೆ ಅಡಿಕೆ ವ್ಯಾಪಾರದಿಂದ ನಿಧಾನವಾಗಿ ಅಡಿಕೆ ವ್ಯಾಪಾರಿಯಾದ. ಚಿಕ್ಕಪ್ಪನ ನೆರಳಿನಿಂದ ಹೊರಬಂದು ಸ್ವತಹ ಟೆಂಡರ್ ಬರೆಯುವಷ್ಟು ದೊಡ್ಡ ವ್ಯಾಪಾರಿಯಾಗಿ ಬೆಳೆದಿದ್ದ. ಸಿರ್ಸಿಯಲ್ಲಿಯೆ ಮನೆ ಮಾಡಿ ಅಸ್ತಮ ರೋಗಿಯಾಗಿದ್ದ ಅಪ್ಪನನ್ನು ಅಲ್ಲಿಯೇ ಕರೆಸಿಕೊಂಡಿದ್ದ. ಊರಿನಲ್ಲಿಯೇ ಇದ್ದು, ಸಾಧಿಸಿ ತೋರಿಸಿದ್ದ. ಇದು ನಮ್ಮೂರಿನ ಅನೇಕರ ಕಣ್ಣಿಗೆ ಉದಾಹರಿಸಬಹುದಾಗಿದ್ದ ಸಾಧನೆಯೇ ಅಲ್ಲ! ಪಿ ಯು ಸಿ ಮುಗಿದಾಗ ತನ್ನ ಓರಗೆಯ ವಯಸ್ಸಿನ ಹುಡುಗರೆಲ್ಲರೂ ಮುಂದಿನ ವಿದ್ಯಾಭ್ಯಾಸಕ್ಕೆ ಬೆಂಗಳೂರು, ಧಾರವಾಡ ಎಂದು ಹೋಗುತ್ತಿರಬೇಕಾದರೆ ಅವನು ಎಷ್ಟು ನೋವನ್ನು ಅನುಭವಿಸಿದ್ದನೊ? ಊದಿನ ಕಡ್ಡಿ ವ್ಯಾಪಾರ ಪ್ರಾರಂಭಿಸಿದಾಗ ಯಾರ್ಯಾರು ಎಷ್ಟು ಹೀಯಾಳಿಸಿದ್ದರೋ? ಕೊಳೆ ಅಡಿಕೆ ಕೊಳ್ಳುವಾಗ ಮಾಡಿದ ಚೌಕಾಸಿಯಿಂದಾಗಿ ಎಷ್ಟು ಬಯ್ಸಿಕೊಂಡಿದ್ದನೋ? ಆರ್ಥಿಕ ಮುಗ್ಗಟ್ಟು, ಅವಕಾಶದ ಕೊರತೆ ಹೀಗೆ ಅನೇಕ ಅಡೆತಡೆಗಳನ್ನು ಎದುರಿಸಿಯೂ ಊರಿನಲ್ಲಿದ್ದುಕೊಂಡೇ ಸಾಧಿಸಿದ.

                ಚೆಸ್ಸಿನಾಟದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಇಟ್ಟುಕೊಂಡಿದ್ದ. ಕವನಗಳನ್ನು ಬರೆಯುತ್ತಿದ್ದ. ಈಗೊಂದಷ್ಟು ದಿನಗಳ ಹಿಂದೆ ಅವನು ಬರೆದಿದ್ದ ಕಥೆ, ಕಾದಂಬರಿ ಮತ್ತು ಕವನ ಸಂಕಲನಗಳ ಪುಸ್ತಕ ಬಿಡುಗಡೆಯಾಗಿದ್ದವು. ಅವನ ಕವನಗಳಿಗೆ ಕುಶಾಲು ಮಾಡುತ್ತಿದ್ದರೂ ಅವನ ಬಗ್ಗೆ ಗೌರವವಿತ್ತು. ಊರಿನ ತೇರು, ದೀಪಾವಳಿ ಹಬ್ಬ ಹೀಗೆ ಕೆಲವುಸಲ ನಾನು ಊರಿಗೆ ಹೋದಾಗ ಸಿಗುತ್ತಿದ್ದ, ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದ. ಅಣ್ಣಯ್ಯನ ಬಗ್ಗೆ ವಿಚಾರಿಸುತ್ತಿದ್ದ.

ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ. ಅವನ ಮನೆಯವರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.

Friday, November 15, 2013

ಅನಿರೀಕ್ಷಿತ ಭೇಟಿಗಳು..

ಕೆಲವು ಸಲ ಅನಿರೀಕ್ಷಿತವಾಗಿ ಅಪರೂಪದವರು ಸಿಕ್ಕಿದರೆ ಅದೆಷ್ಟು ಗೊಂದಲವಾಗುತ್ತದೆ ಅನ್ನುವುದನ್ನು ಅನುಭವಿಸಿದ್ದೀರಾ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಅನ್ನುವುದು ಗೊತ್ತಾಗದೆ ಒದ್ದಾಡುವುದು, ನಗು ಬರದಿದ್ದರೂ ನಗುವುದು ಇವನ್ನೆಲ್ಲ ಅನುಭವಿಸಿಯೇ ನೋಡಬೇಕು. ಬಹುಷಃ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಇದರ ಅನುಭವ ಆಗಿಯೇ ಇರುತ್ತದೆ. ಕೆಲವರು ತಡಬಡಾಯಿಸಿದರೆ ಕೆಲವರು ಹೇಗೋ ನಿಭಾಯಿಸಿಬಿಡುತ್ತಾರೆ. ಬೇಡದ ಜಾಗದಲ್ಲಿ, ಬೇಡದ ಸಂದರ್ಭದಲ್ಲಿ ಸಿಕ್ಕರಂತು ಮುಖ ಹುಳ್ಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು.

ನಮ್ಮ ಸುತ್ತಲಿನ ಊರಿಗೆಲ್ಲ ಹೆಸರುವಾಸಿಯಾದ ಮನೆಯೊಂದಿದೆ. ಪುಂಖಾನುಪುಂಖವಾಗಿ ಯಾವ ವಿಷಯದ ಬಗ್ಗೆಯಾದರೂ ಯಾರಿಗೆ ಬೇಕಾದರೂ ಕಂಡಕಂಡಲ್ಲಿ ಭಾಷಣ ಬಿಗಿಯುವುದರಲ್ಲಿ ಅವರು ನಿಸ್ಸೀಮರು. ಮದುವೆ ಮುಂಜಿಗೆ ಆಮಂತ್ರಣ ಕೊಡಲು ಅವರ ಮನೆಗೆ ಹೋಗೋಣವೆಂದರೆ ಕೆಲವರು ಅದನ್ನು ತಮ್ಮ ಕೊಲೆಯ ಸಂಚೆನೋ ಅನ್ನುವಂತೆ ಬೆಚ್ಚುತ್ತಾರೆ. ಯಾರಾದರೂ ಅವರ ಮನೆಗೆ ಹೋದರೆ ಸಾಕು, ಕುದಿಯುತ್ತಿರುವ ಚಹಾ ಎದುರಿಗಿಟ್ಟು ಅದು ಆರುವವರೆಗೂ ಇಡೀ ಮನೆಯವರೆಲ್ಲ ಸೇರಿ ಮೆದುಳಿಗೆ ಕೈ ಹಾಕಿ ಕಲಸಿಬಿಡುತ್ತಾರೆ. ಅಲ್ಲಿಂದ ಹೊರಬಂದಮೇಲೆ ಜಗತ್ತಿನ ವೈಶಾಲ್ಯ ಹಾಗು ಶಾಂತತೆಯ ಪರಿಚಯ ಸರಿಯಾಗಿ ಆಗಿ ಅವುಗಳ ಮಹತ್ವ ತಿಳಿಯುತ್ತದೆ.

ಹಿಂದಿನವಾರ ನನ್ನ ಗೆಳೆಯನೊಬ್ಬನಿಗೆ "ಆ" ಮನೆಯವರಿಬ್ಬರು ಬೆಂಗಳೂರಿನಲ್ಲಿ ಸಿಕ್ಕಿದ್ದರಂತೆ. ರಸ್ತೆಯಲ್ಲೆಲ್ಲೋ ಇವನು ಹೋಗುತ್ತಿರುವಾಗ ಅಚಾನಕ್ಕಾಗಿ ಅವರಿಬ್ಬರೂ ಎದುರಿಗೆ ಪ್ರತ್ಯಕ್ಷವಾದಾಗ ಎನುಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾದನಂತೆ. ಒಂದೇ ಊರಿನವರು ಆದದ್ದರಿಂದ ಎದುರಿಗೆ ಸಿಕ್ಕಾಗ ಮಾತನಾಡಿಸುವು ಸೌಜನ್ಯ. ಉಭಯಕುಶಲೋಪರಿ ಮಾತುಕತೆಯಾದಮೇಲೆ ಮನೆಯೆಲ್ಲಿ ಇದೆ ಎಂದು ಅವರು ಕೇಳಿದಾಗಲೇ ಪರಿಸ್ಥಿತಿಯ ಗಹನತೆ ಅವನ ಅರಿವಿಗೆ ಬಂದಿದ್ದು. ಯಾವುದೋ ಮಾತಿನ ಭರದಲ್ಲಿ ಮನೆಯ ವಿಳಾಸವನ್ನು ಹೇಳದೆ, ತಲೆಹೋಗುವಂತ ಕೆಲಸವನ್ನೇನೋ ಆರೋಪಿಸಿಕೊಂಡು ಅಲ್ಲಿಂದ ಕಾಲ್ಕಿತ್ತನಂತೆ. ಅಂತಹ ಸಂದರ್ಭದಲ್ಲೂ ಸಹ ಅವನಿಗೆ ನನ್ನ ಮನೆಯ ವಿಳಾಸವನ್ನು ಕೊಡುವ ಆಲೋಚನೆ ಬಂದಿತ್ತಂತೆ. ನಾನು ತೀರ್ಮಾನಿಸಿದ್ದೇನೆ, ಯಾರಿಗೂ ನನ್ನ ಮನೆಯ ವಿಳಾಸವನ್ನು ಮಾತ್ರಾ ಕೊಡಬಾರದೆಂದು.

ಕೆಲವುಸಲ ಅಪರೂಪಕ್ಕೆ ಸಿಕ್ಕವರ ಹೆಸರು ನೆನಪಿನಲ್ಲಿರುವುದಿಲ್ಲ. ಆಗ ನೆನಪಿಸಿಕೊಳ್ಳುವುದಕ್ಕೆ ಒದ್ದಾಡಬೇಕು. ಆಗ ಹೆಂಡತಿಯನ್ನು ಕರೆದು "ಇಲ್ಲಿ ನೋಡು ಯಾರು ಸಿಕ್ಕಿದ್ದಾರೆಂದು!!" ಹೇಳಿ ಅವಳಿಗೆ ಏನಾದರು ಸಿಕ್ಕವರ ಹೆಸರು ಗೊತ್ತಿದೆಯೋ ಎಂದು ಕೇಳುವುದು. "ಅರೆ ನೀನು!! ನಿನ್ನನ್ನು ಮರೆಯುವುದಕ್ಕೆ ಸಾಧ್ಯವಾ.." ಎಂದು ಹುಳಿ ಹುಳಿ ನಗೆಯಾಡುವುದು, ಇಂತಹ ಚೇಷ್ಟೆಗಳು ಸಾಮಾನ್ಯ. ನಾನಂತೂ ಸಿಕ್ಕವರ ಮುಖಕ್ಕೆ ಯಾವ ಹೆಸರು ಹೊಂದುತ್ತದೆ ಎಂದು ನೋಡಿ ಯಾವುದೋ ಒಂದು ಹೆಸರನ್ನು ಹೇಳಿಬಿಡುತ್ತೇನೆ ಅಮೇಲಾಗುವ ಪರಿಣಾಮಗಳಿಗೆ ಸಿದ್ದನಾಗಿಯೇ. ಕೆಲವರಂತೂ "ನಾನು ಯಾರು ಹೇಳು ನೋಡೋಣ" ಅಂತ ತಲೆ ಬಿಸಿ ಮಾಡುತ್ತಾರೆ. ಪಕ್ಕದ ಮನೆಯ ಚಿಕ್ಕಪ್ಪನೊಬ್ಬನಿದ್ದಾನೆ ಅವನು ಯಾರಿಗೆ ಯಾವ ಹೆಸರನ್ನು ಬೇಕಾದರೂ ಹೇಳುತ್ತಾನೆ. ಒಮ್ಮೆ ಅವರ ಮನೆಗೆ ಬಂದ ಅತ್ತಿಗೆಯೊಬ್ಬರಿಗೆ "ವಿನಾಯಕ ಅಕ್ಕ" ಅಂತ ಕರೆದುಬಿಟ್ಟಿದ್ದ. ಹತ್ತೆಂಟು ನೆಂಟರಿಷ್ಟರ ಹೆಸರೇ ನಮಗೆ ನೆನಪಿರುವುದಿಲ್ಲ, ಇನ್ನು ವೈದ್ಯರು ಹೇಗೆ ನೂರಾರು ಔಷಧಿಗಳ ಹೆಸರನ್ನು ನೆನಪಿಟ್ಟುಕೊಳ್ಳುತ್ತಾರೆ?

ಅನಿರೀಕ್ಷಿತವಾಗಿ ಅತ್ಮೀಯರೋ, ಬೇಕಾದ ಬಂಧುಗಳೋ ಸಿಕ್ಕರೆ ಆಗುವ ಸಂತೋಷವೂ ಸಹ ಅಪ್ರಮತಿಮ. 
ಇಂತಹ ವೇಗದ ಜೀವನದಲ್ಲಿ ಭೇಟಿ ಮಾಡಬೇಕೆಂದು ಆಲೋಚಿಸುತ್ತಿರಬೇಕಾದರೆ ಹಠಾತ್ತಾಗಿ ಸಿಗಬೇಕಾದವರು ಸಿಕ್ಕಿ ನಮ್ಮ ಜೊತೆ ಸಮಯ ಕಳೆದರೆ ತುಂಬಾ ಆನಂದವಾಗುತ್ತದೆ.

Thursday, August 22, 2013

ಮೂರ್ತಿ


ಮೂರ್ತಿ ತುಂಬಾ ಒಳ್ಳೆಯ ಮನುಷ್ಯ. ಅವನು ಚಿಕ್ಕವನಿರುವಾಗಿನಿಂದ ನನಗೆ ಗೊತ್ತು. ಚಿಕ್ಕವನಿರುವಾಗ ಅವನು ಎಷ್ಟು ಮುದ್ದಾಗಿದ್ದನೆಂದರೆ ಯಾರೂ ಅವನ ಕೆನ್ನೆ ಚಿವುಟದೆ ಮಾತನಾಡಿಸುತ್ತಿರಲಿಲ್ಲ. ಗುಣದಲ್ಲೂ ಸಹ ತುಂಬಾ ಸೌಮ್ಯ ಸ್ವಭಾವದ ಮಾಣಿಯಾಗಿದ್ದ. ಉಳಿದ ಮಕ್ಕಳಂತೆ ವಿನಾಕಾರಣ ಹಠ, ರಗಳೆ ಯಾವುದೂ ಇರಲಿಲ್ಲ. ಲಿಗಾಡಿ ಅನ್ನುವುದನ್ನಂತೂ ಮಾಡಿಯೇ ಇಲ್ಲ ಅನ್ನಬಹುದು.

ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ. ಹೈ ಸ್ಕೂಲ್ ಮುಗಿಯುವವರೆಗೂ ಶಾಲೆಗೇ ಅವನೇ ಮೊದಲಿಗ. ಓರಗೆಯ ಹುಡುಗರಂತೆ ಶಾಲೆಯಿಂದ ಬಂದ ತಕ್ಷಣ ಪಾಟಿಚೀಲವನ್ನು ಎಲ್ಲೋ ಒಗೆದು ಆಡಲು ಓಡುವ ಹುಡುಗನಾಗಿರಲಿಲ್ಲ. ಸ್ವಲ್ಪ ಏನನ್ನಾದರೂ ತಿಂದು, ಶಾಲೆಯಲ್ಲಿ ಕೊಟ್ಟ ಬರವಣಿಗೆಯನ್ನೂ, ಕೆಲಸವನ್ನೂ ಮುಗಿಸಿಯೇ ಏಳುತ್ತಿದ್ದ. ನೆಂಟರಿಷ್ಟರು ತಮ್ಮ ಮಕ್ಕಳಿಗೆ ಬಯ್ಯುವಾಗ "ಮೂರ್ತಿಯನ್ನು ನೋಡಿ ಕಲಿತುಕೋ" ಎನ್ನುವುದು ಮಾಮೂಲಾಗಿತ್ತು.

ಪಿ ಯು ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾಗಿ, ಇಂಜಿನಿಯರಿಂಗ್ ಕೋರ್ಸ್ ಗೆ ಸೇರಿ ಯಶಸ್ವಿಯಾಗಿ ಮುಗಿಸಿ ಈಗ ವಿದೇಶದ ಯಾವುದೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸಂಬಳ ತೆಗೆದುಕೊಳ್ಳುತ್ತಿದ್ದಾನೆ. ಮನೆ ಕಾರು ಎಲ್ಲ ಇದೆ. ತಂದೆ ತಾಯಿಗೆ ಇದಕ್ಕಿಂತ ಖುಷಿ ಬೇಕೇ? ಒಂದು ಒಳ್ಳೆಯ ಕೂಸು ಹುಡುಕಿ ಅವನ ಮದುವೆ ಮಾಡಿಬಿಟ್ಟರೆ ತಂದೆ ತಾಯಿ ಆರಾಮಾಗಿರಬಹುದು. ನಿಮಗೆ ಗೊತ್ತಿದ್ದ ಹಾಗೆ ಯಾವುದಾದರೂ ಕೂಸು ಇದೆಯೇ?



Thursday, July 11, 2013

ಬುತ್ತಿ

ಜೋರಾಗಿ ಮಳೆ ಬರುತ್ತಿತ್ತು, ಆಕಾಶ ಕಪ್ಪಾಗಿ ಮನೆಯೊಳಗೂ ಕತ್ತಲು ಇರುವಂತೆ ಮಾಡಿತ್ತು. ಯಾಕೋ ಬಹಳ ದಿನಗಳ ನಂತರ ಒಬ್ಬನೇ ಕೂತು ಏಕಾಂತವನ್ನು ಅನುಭವಿಸುವ ಆಸೆಯಾಗಿತ್ತು. ಏನು ಇಲ್ಲ ಸುಮ್ಮನೆ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು, ಮುಂದಿನ ಕನಸುಗಳಿಗೆ ತೇಪೆ ಹಚ್ಚುವುದೇ ನನ್ನ ಆಸೆಯಾಗಿತ್ತು. ಯಾವ್ಯಾವುದೋ ನೆನಪುಗಳು, ಯಾರದೋ ಮಾತುಗಳು ಎಲ್ಲವು ಒಟ್ಟಿಗೆ ತಲೆಯಲ್ಲಿ ಬಂದು ಜಡಕಾಗಿ ಹೋಯಿತು. ಸರಿ, ಕ್ರಮಬಧ್ಧವಾಗಿ ಬಾಲ್ಯದಿಂದ ನೆನಪಿಸಿಕೊಳ್ಳೋಣ ಎಂದು ಪ್ರಾರಂಭಿಸಿದೆ. ಅನುಕ್ರಮವಾಗಿ ಬರಲು ಅದೇನು ತಿಂಗಳ ಸಂಬಳವಾ?

ನನಗೆ ನಿದ್ದೆ ಬರುವವರೆಗೂ ಪಕ್ಕದಲ್ಲೇ ಮಲಗಿ ನನ್ನ "ಎಂತಕ್ಕೆ" ಎನ್ನುವ ಅಸಂಬಧ್ಧ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕೊಡುತ್ತಿದ್ದ "ಅಣ್ಣ". ನನಗೆ ಕತ್ತಲೆಯೆಂದರೆ ಭಯಂಕರ ಹೆದರಿಕೆಯಿತ್ತು. ರಾತ್ರಿ ಮೂತ್ರ ಬಂದು ಎಚ್ಚರವಾದಾಗ ಅಣ್ಣನ ಕೋಣೆಯ ಬಾಗಿಲ ಬಳಿ ನಿಂತು "ಅಣ್ಣಾ ಓ ಅಣ್ಣಾ" ಎಂದು ಕರೆದಾಗ ಅಲ್ಲೇ ಮಲಗಿರುವ ಅಣ್ಣಯ್ಯ, ಭಾವ ಎಲ್ಲರೂ ಬಯ್ಯುತ್ತಿದ್ದರು. ಈಗ ಮಲಗಿರುವಾಗ ಯಾರದ್ದಾದರೂ ಫೋನ್ ಬಂದರೆ ಅದೇನು ಅಲವರಿಕೆ ನನಗೆ. ಒಂದು ದಿನವೂ ಅಣ್ಣ "ನೀನೆ ಹೋಗಿ ಮೂತ್ರ ಮಾಡಿ ಬಾ, ನನ್ನ ಎಬ್ಬಿಸಬೇಡ" ಎಂದದ್ದಿದೆಯೇ?

ಆಗ ಸಣ್ಣವನಿದ್ದೆ. ನಮ್ಮೂರಿನ ಪ್ರೌಢ ಶಾಲೆಯ ವಾರ್ಷಿಕೋತ್ಸವಕ್ಕೆ ನೀನು ಹೋಗುವುದು ಬೇಡ ಎಂದು ಮನೆಯವರೆಲ್ಲರೂ ಹೇಳುತ್ತಿದ್ದರೂ, ದೊಡ್ಡಣ್ಣ, ಹತ್ತನೇ ತರಗತಿಯಲ್ಲಿ ಓದುತ್ತಿದ್ದ, ಬೆನ್ನಿನ ಮೇಲೆ "ಉಪ್ಪಿನ ಮೊಟ್ಟೆ" ಮಾಡಿಕೊಂಡು ಕರೆದುಕೊಂಡು ಹೋಗಿದ್ದ. ಮೂರೂವರೆ ಕಿ ಮಿ ಹೊತ್ತುಕೊಂಡು ಹೋಗಿದ್ದ. ಆಗಿನ ಸಂತೋಷ ತಿರುಗಿ  ಬರಬಹುದಾ? ಬಹುಷಃ ಅಣ್ಣನಿಗೂ ಈ ಘಟನೆ ನೆನಪಿರಲಿಕ್ಕಿಲ್ಲ.

ಶಾಲೆಯ ರಜಾ ದಿನಗಳಲ್ಲಿ ಮನೆಗೆ ಬಂದ ಅತ್ತೆಯರ ಮಕ್ಕಳೊಡನೆ ಹೊಳೆಗೆ ಹೋಗಿ ಪಂಜಿಯ ತುಂಡಿನಲ್ಲಿ ಅವಲಕ್ಕಿ ಹಾಕಿಕೊಂಡು ಮೀನು ಹಿಡಿಯುವ ಸಂಭ್ರಮವನ್ನು ಹೇಗೆ ವರ್ಣಿಸಲಿ. ಹದಿನೈದಿಪ್ಪತ್ತು ದಿನ ವಯಸ್ಸಿನ ನಾಯಿ ಮರಿಗಳನ್ನು ಈಜು ಕಲಿಸೋಣವೆಂದು ಹೊಳೆಗೆ ತೆಗೆದುಕೊಂಡು ಹೋಗಿ ತೇಲಿಬಿಡುವುದರಲ್ಲಿದ್ದಾಗ ಕಂಡ ಅಜ್ಜನ ಹತ್ತಿರ ಬೈಸಿಕೊಂಡಾಗ ಅದ ಅವಮಾನ ಲೆಕ್ಕಕ್ಕೆ ಸಿಗುವುದೇ? ಆಯಿ ಹಾಲು ಹಿಂಡುವಾಗ ದೊಣಕಲಿನಲ್ಲಿ ನಿಂತುಕೊಂಡು ಮಾತನಾಡುತ್ತಾ ಆಕಳ ಕಿವಿ ತಿರುಪಿ ಅದು ಆಯಿಗೆ ಒದ್ದಾಗ ಆದ ಭಯ ಪುನರಾವರ್ತನೆ ಆಗುವುದೇ?

ಏಳನೇ ತರಗತಿಯಲ್ಲಿದ್ದಾಗ ಕೇಂದ್ರ ಮಟ್ಟದ ಭಾಷಣ ಸ್ಫರ್ದೆಯಲ್ಲಿ ಪ್ರಥಮ ಬಹುಮಾನ ಗೆದ್ದಾಗ ಆದ ಖುಷಿ, ಹತ್ತನೇ ತರಗತಿಯಲ್ಲಿ ಇದ್ದಾಗ ವಾರ್ಷಿಕೋತ್ಸವದ ದಿನ ಮಾಡಿದ ನಾಟಕದ ಪಾತ್ರ ನಿರೀಕ್ಷೆಗೂ ಮೀರಿ ಜನಪ್ರಿಯವಾದಾಗ ಆದ ಹೆಮ್ಮೆ ನೆನಪಿನಲ್ಲಿ ಕಚಗುಳಿ ಇಡುತ್ತವೆ. ಪ್ರೌಢಶಾಲೆಯಲ್ಲಿರುವಾಗಿನ ಕ್ರಿಕೆಟ್ ಹುಚ್ಚು ಬಾಲಿಶ ಎನಿಸುತ್ತದೆ. ಕುಳ್ಳಗಿದ್ದುದರಿಂದ ಪ್ರಾರ್ಥನೆ ಮಾಡುವಾಗ ಸಾಲಿನಲ್ಲಿ ಎದುರಿಗೆ ನಿಲ್ಲುವಾಗ ಬರುತ್ತಿದ್ದ ಆಕ್ರೋಶ ಯಾರಮೇಲಿನದೋ? ಹೈ ಸ್ಕೂಲ್ ನಿಂದ ಮನೆಗೆ ಹೋಗುವಾಗ ಕೆಲವೊಮ್ಮೆ ವಿ ಡಿ ಅಂಗಡಿಯಿಂದ ಕೊಳ್ಳುತ್ತಿದ್ದ ಶೇಂಗಾ, ಶುಂಟಿ ಪೆಪ್ಪರಮೆಂಟ್ ರುಚಿ ಮರೆಯಲಾಗುವುದೇ?

ವಿಜ್ಹ್ನಾನವೆಂದರೇನು ವಾಣಿಜ್ಯವೆಂದರೇನು ಗೊತ್ತಿಲ್ಲದೇ ಪಿ ಯು ಸಿ ಯಲ್ಲಿ ವಿಜ್ಹ್ನಾನ ಆರಿಸಿಕೊಂಡು ಮೊದಲ ವರ್ಷ ನಪಾಸಾದಾಗ ಆದ ಅವಮಾನ, ಕೀಳರಿಮೆ, ಭವಿಷ್ಯದ ಬಗೆಗಿನ ಹೆದರಿಕೆ ಏಕೆ ನೆನಪಾಗುತ್ತದೋ? ನಂತರ ವಾಣಿಜ್ಯವನ್ನು ತೆಗೆದುಕೊಂಡು ಪ್ರಥಮ ವರ್ಷ ಪ್ರತಿಶತ ೮೦ ಅಂಕಗಳನ್ನು ತೆಗೆದುಕೊಂಡಾಗ ಏನೋ ಪ್ರತಿಕಾರ ತೀರಿಸಿಕೊಂಡ ಭಾವ, ಬೇಕಿತ್ತಾ ಅನಿಸುತ್ತದೆ.

ಸಣ್ಣವನಿದ್ದಾಗಿನಿಂದ ಇಲ್ಲಿಯವರೆಗೂ ಪಡೆದುಕೊಂಡ ಸಹಾಯಗಳೆಷ್ಟೋ.. ಅತ್ತೆಯ ಮಗಳು ಅತ್ತಿಗೆಯಿಂದ ಗಂಟೆ ನೋಡುವುದು ಕಲಿತೆ, ಭಾವನಿಂದ ಮಗ್ಗಿ ಕಲಿತೆ, ಅಣ್ಣಯ್ಯನಿಂದ ಲೆಕ್ಕ ಕಲಿತೆ... ಇನ್ನೂ ಎಷ್ಟೆಷ್ಟೋ ಜನರಿಂದ ನಾ ನಾ ರೀತಿಯಿಂದ ಉಪಕೃತನಾಗಿದ್ದೇನೆ. ಅವರೆಲ್ಲರಿಗೂ ಧನ್ಯವಾದ ಹೇಳುವ ಮನಸ್ಸಾಗಿದೆ...

ಏನೇ ಹೇಳಿ "ಬೀಚಿ"ಯ ಮಾತು ನಿಜವೆನ್ನಿಸುತ್ತದೆ. ಸಂತೋಷ ಎನ್ನುವುದು "ನೆನಪುಗಳಲ್ಲಿರುತ್ತದೆ". ನೆನಪುಗಳ ಜೊತೆ ಹೊತ್ತು ಕಳೆದಮೇಲೆ ಎಷ್ಟು ಮುದವೆನ್ನಿಸುತ್ತದೆ.. ಅಲ್ಲವೇ?