Tuesday, November 18, 2014

ಕರೆಯದ ತಿರುಗಾಟ

ಮಂಗಳ ಕಾರ್ಯಗಳಿಗೆ ಬಂಧು ಬಳಗವನ್ನು ಆಮಂತ್ರಿಸಲು ಹೋಗುವುದೂ ಒಂದು ಜೀವನಾನುಭವ! ಬಹಳ ಸರ್ತಿ ನಾನು ಈ ಜೀವನಾನುಭವವನ್ನು ಅನುಭವಿಸಿದ್ದಿದೆ. ಅದರ ಮಜವೇ ಬೇರೆ. ಯಾರಲ್ಲೋ ದಾರಿ ಕೇಳುವುದು, ಮನೆಯನ್ನು ಹುಡುಕಿಕೊಂಡು ಹೋಗುವುದು, ಹೋದ ಮನೆಯಲ್ಲಿ ನಮ್ಮ ಪರಿಚಯ ಹೇಳಿಕೊಳ್ಳುವುದು, ಅಲ್ಲಿ ಆಸರಿಗೆ ಊಟ ಮಾಡುವುದು ಎಲ್ಲವೂ ಒಂದೊಂದು ನಮೂನೆಗಳೇ. ಅದರಲ್ಲೂ ಕೆಲವು ಪ್ರಸಂಗಗಳು ಮೆಲುಕು ಹಾಕಿದಷ್ಟೂ ಸ್ವಾರಸ್ಯವಾಗುತ್ತಾ ಹೋಗುತ್ತವೆ.

ಮನೆಯವರು ಕೂತು ಬಳಗದ ಲಿಸ್ಟ್ ಮಾಡಿ ಕೊಡುತ್ತಾರೆ. ಅದರಲ್ಲಿ ನಮಗೆ ಪರಿಚಯ ಇರುವ ನೆಂಟರು ಬಹಳ ಕಡಿಮೆ. ಸಂಬಂಧಗಳ ಬಾವಿಯಲ್ಲಿ ಆಳಕ್ಕೆ ಇಳಿದು ದೂರ ದೂರದ ನೆಂಟರನ್ನೂ ನೆನಪು ಮಾಡಿಕೊಂಡು ಹೆಕ್ಕಿ ತೆಗೆದು ಬರೆದು ಕೊಟ್ಟಿರುತ್ತಾರೆ. ಏನಾದರೂ ಇವರು ನಮಗೆ ಹೇಗೆ ಸಂಬಂಧ ಎಂದು ಕೇಳಿದರೆ ಮುಗಿಯಿತು, ಅವರ ವಂಶವ್ರಕ್ಷವನ್ನೇ ನಮ್ಮ ಕಣ್ಣೆದುರು ಹಿಡಿದು ಅದನ್ನು ನಮ್ಮ ಮನೆಯ ವಂಶವ್ರಕ್ಷಕ್ಕೆ ತಳಿಕೆ ಹಾಕಿ ಆಧ್ಯಾತ್ಮದ ಚಿಂತನೆ ಮಾಡುವ ಅನಿವಾರ್ಯತೆ ತಂದೊಡ್ಡುತ್ತಾರೆ. ಇದು ಬಿಡಿ. ಕೆಲವು ಸಲ ನಾವು ಹೋದ ಮನೆಯವರಿಗೇ ಇವ ಅದು ಹೇಗೆ ನಮಗೆ ಸಂಬಂಧ ಎಂಬುದು ತಿಳಿಯುವುದಿಲ್ಲ.

ಗೊತ್ತಿಲ್ಲದ ಮನೆಗೆ ದಾರಿಯನ್ನು ಕೇಳುತ್ತಲೇ ಹೋಗಬೇಕು. ಕೆಲವೊಮ್ಮೆ ಕೆಲವರು ದಾರಿ ಹೇಳುವ ಮೊದಲು ನಮ್ಮ ಮನೆಯ ವಿವರ ಕೇಳುತ್ತಾರೆ. ಅದನ್ನು ಕೇಳುತ್ತಲೇ "ಓ ನೀನು ಅವನ ಮಗನ? ಅವ ನನ್ನ ನಾದಿನಿಯ ಷಡಕ ಆಗ್ತಾ" ಎಂದೋ ಅಥವಾ "ನನ್ನ ಷಡಕನ ಅಜ್ಜನ ಮನೆ ನಿನ್ನ ಅಪ್ಪನ ಅಜ್ಜನ ಮನೆ ಎರಡು ಒಂದೆಯಾ" ಎಂದೋ ಹೇಳಿ ಅವರ ಮನೆಗೆ ಕರೆದೊಯ್ಯುತ್ತಾರೆ. ಅಲ್ಲಿ ಆಸರಿಗೆ ಕುಡಿದು ಮಂಗಳ ಕಾರ್ಯಕ್ಕೆ ಆಮಂತ್ರಿಸಿ ಹೊರಟು ಹೋದಮೇಲೆ ತಿಳಿಯುತ್ತದೆ, ನಮ್ಮ ಲಿಸ್ಟಿನಲ್ಲಿ ಅವರ ಹೆಸರೇ ಇಲ್ಲ ಎಂಬುದು.

ಹೋದ ಎಲ್ಲ ಮನೆಗಳಲ್ಲೂ ಆಸರಿಗೆ ಕುಡಿಯಲೇ ಬೇಕು. ಯಾವ ಮನೆಯವರೂ ಹಾಗೆ ಕಳುಹಿಸುವುದಿಲ್ಲ. ನಮಗೆ ಬೇಕೋ ಬೇಡವೋ ಅನ್ನುವುದು ಲೆಕ್ಕಕ್ಕೆ ಇಲ್ಲ. ತುಂಬಾ ಕಡೆ ಆಸರಿಗೆ ಆಗಿದೆ ಅಂದರೆ ಅವಷ್ಟರ ಜೊತೆ ಇನ್ನೊಂದು ಅರ್ದ ಕಪ್ ಚಹ ಹೆಚ್ಚಲ್ಲ ಎಂದು ಕುಡಿಸಿಯೇ ಕಳುಹಿಸುತ್ತಾರೆ. ನಮ್ಮ ಗ್ರಹಚಾರ ಸರಿ ಇಲ್ಲದಿದರೆ ಕೆಲವರು ರವೆ ಶಿರ ಕಾಯಿಸಿ ಬಡಿಸುತ್ತಾರೆ. ಇಂತಹ ಆಸರಿಗೆಗಳ ಮಧ್ಯೆ ಊಟ ಮಾಡಲಾಗುವುದೇ? ಮಧ್ಯಾಹ್ನದ ಹೊತ್ತಲ್ಲಿ ಖಾಲಿ ಬಸ್ ಸ್ಟಾಪ್ ನಲ್ಲೋ ಅಥವಾ ಶಾಲೆ ಮನೆಯ ವರಾಂಡದಲ್ಲೋ ಕುಳಿತು ಊಟದ ಹೊತ್ತು ಮೀರಿದ ಮೇಲೆ ಮುಂದಿನ ಮನಗೆ ಹೋಗಿದ್ದಿದೆ. ಸತತ ಮೂರನೆ ದಿನ ಇಂತಹ ತಿರುಗಾಟದ ಪರಿಣಾಮ ಹೊಳೆ ಕಂಡಲ್ಲೆಲ್ಲ ಬೈಕ್ ನಿಲ್ಲಿಸುವ ತಾಪತ್ರಯವಗಿತ್ತು.

ಸಮಯದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವ ಉದ್ದೇಶದಲ್ಲಿ ಬೈಕನ್ನು ಜೋರಾಗಿ ಬಿಡುತ್ತಿದ್ದ ನನ್ನ ಜೋಸ್ತನಿಗೆ "ಟೊಪ್ಪಿ ಜಾರಿ ಹೋಯಿತು" ಎಂದು ಹೇಳಿದ್ದು "ದಾರಿ ತಪ್ಪಿ ಹೋಯಿತು" ಎಂದು ಕೇಳಿ ದೊಡ್ಡ ಭಾನಗಡೆಯೇ ಆಗಿತ್ತು. ಆಸರಿಗೆಯ ಹೊಡೆತ ತಪ್ಪಿಸಿಕೊಳ್ಳಲು ಒಬ್ಬರನ್ನು ಬೈಕಿನ ಹತ್ತಿರವೇ ನಿಲ್ಲಿಸಿ, ಅವನನ್ನು ಬಾಡಿಗೆ ಬೈಕಿನವ ಎಂದು ಹೇಳಿದ್ದೂ ಇದೆ. ಕಾರ್ಯಕ್ಕೆ ಎಲ್ಲರನ್ನೂ ಕರೆದೂ ಕರೆದು ಅದೆಷ್ಟು ಅಭ್ಯಾಸವಾಗುತ್ತದೆ ಅಂದರೆ ಯಾರಲ್ಲೋ ದಾರಿ ಕೇಳಿ ಅವನ ಹತ್ತಿರವೂ "ಬನ್ನಿ ನಮ್ಮ ಮನೆಗೆ" ಎಂದು ಕರೆದದ್ದೂ ಇದೆ. ಆಶ್ಚರ್ಯ ಇದಲ್ಲ. ದಾರಿ ಹೇಳಿದವನೂ ಸಹ "ಅಡ್ಡಿಲ್ಲೆ, ನೀವೂ ಬನ್ನಿ" ಅಂದಿದ್ದು.

ಒಂದು ಮನೆಯಲ್ಲಿ ಆಸರಿಗೆ ಕುಡಿದು ಕೈ ತೊಳೆದು ಹೊರಗೆ ಬರುತ್ತಿರುವಾಗ ಹಾಸಗೆಯಲ್ಲಿ ಮಲಗಿದ್ದ ಅಜ್ಜಿಯೊಬ್ಬಳು ಬಂದವರು ಯಾರು ಎಂದು ಕೇಳಿದಳು. ನಾನು ಸಹಜವಾಗಿಯೇ ನಮ್ಮನೆಯ ಹೆಸರು ಹೇಳಿದೆ. ಆಗ ಕಷ್ಟಪಟ್ಟು ಎದ್ದು ಕುಳಿತ ಅವಳು "ನೀನು ಗಪ್ಪಿಯ ಮೊಮ್ಮಗನ?" ಎಂದು ಕೇಳಿ, ಹತ್ತಿರ ಕೂರಿಸಿಕೊಂಡು ತಲೆ ನೆವರಿಸಿದ್ದಳು. ಒಮ್ಮೆ ನೋಡಿದರೂ ನೆನಪಿಟ್ಟುಕೊಂಡು ಆಮೇಲೆ ಎಲ್ಲಿ ಸಿಕ್ಕಿದರೂ ಪ್ರೀತಿಯಿಂದ ಮಾತನಾಡಿಸುವ ಜನರು ಬಹಳ.

ಕರೆಯದ ಈ ತಿರುಗಾಟದಲ್ಲಿ ಚಿಕ್ಕ ಪುಟ್ಟ ತೊಂದರೆ ಇದ್ದರೂ ಹೊಸ ಜನರನ್ನು, ಊರನ್ನು ನೋಡುವ ಅವಕಾಶ ಸಿಗುತ್ತದೆ. ಅದೃಷ್ಟ ಚೆನ್ನಾಗಿದ್ದರೆ ಮುಂದೆ ಯಾವಾಗಲಾದರೂ ಅವರಲ್ಲಿ ಕೆಲವರ ಕವನವನ್ನೂ ಒದಲೂಬಹುದು.


Friday, January 24, 2014

ಅರವಿಂದ

               ಇವತ್ತು ಬೆಳಿಗ್ಗೆ ಕೇಳಿದ ಸುದ್ದಿ ತುಂಬಾ ಅಘಾತಕಾರಿಯಾಗಿತ್ತು. ನನಗಿಂತ ಮೂರು ವರ್ಷ ಹಿರಿಯವನಾದ ಅರವಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಅರವಿಂದನಂತಹ ಮನುಷ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನುವುದು ಸುಲಭಕ್ಕೆ ನಂಬಲಿಕ್ಕೆ ಆಗದಂತಹ ವಿಷಯ. ಅವನನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅಘಾತವಾಗದಿರದು. ತುಂಬಾ ಗಟ್ಟಿ ಮನಸ್ಸಿನ, ಛಲವಿರುವ, ಜೀವನ ಪ್ರೀತಿಯಿದ್ದ ಮನುಷ್ಯ. ಆತ್ಮಹತ್ಯೆ ಮಾಡಿಕೊಳ್ಳುವಸ್ಟು ದುರ್ಬಲನಾಗಿರಲಿಲ್ಲ. ಕೊನೇಪಕ್ಷ ನಾನು ಅವನನ್ನು ನೋಡುತ್ತಿರುವವರೆಗೂ ದುರ್ಬಲನಾಗಿರಲಿಲ್ಲ.

         ಅರವಿಂದನೆಡೆಗೆ ಒಂದು ತೆರನಾದ ಗೌರವವಿತ್ತು. ನನ್ನ ಅಣ್ಣನ ಸಹವರ್ತಿಯಾಗಿದ್ದ ಅವನು ನಾನು ಚಿಕ್ಕವನಿದ್ದಾಗಿಂದಲೂ ಒಡನಾಟಕ್ಕೆ ಸಿಗುತ್ತಿದ್ದ. ಓದಿನಲ್ಲಿ ಚುರುಕಾಗಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಪಿ ಯು ಸಿ ಗೆ ಓದನ್ನು ನಿಲ್ಲಿಸಿದ್ದ. ಹೈ ಸ್ಕೂಲ್ ನಲ್ಲಿ ಓದಿನ ಜೊತೆಗೆ ಉಳಿದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಚದುರಂಗ ಆಟವನ್ನು ತುಂಬಾ ಚೆನ್ನಾಗಿ ಆಡುತ್ತಿದ್ದ. ಆ ಆಟದ ಆಸಕ್ತಿ ಅವನಿಗೆ ಈಗಲೂ ಇತ್ತು ಎಂಬುದು ಅವನ ಫೇಸ್ಬುಕ್ ಫೋಟೋ ಗಳಿಂದ ತಿಳಿದಿತ್ತು.

            ಚಿಕ್ಕವನಿರುವಾಗ ಉರವರು ಯಾರು ಯಾರನ್ನೋ ನಮಗೆ ಉದಾಹರಿಸಿ "ಅವನನ್ನು ನೋಡಿ ಕಲಿಯಿರಿ" ಎನ್ನುತ್ತಿದ್ದರು. ಅವರೋ ತಾನು ಊರಿನಿಂದ ಹೊರಗಿರುವುದರಿಂದ ಮನೆಯ ಅಂಗಳಕ್ಕಿಳಿಯಬೇಕಾದರೂ ಚಪ್ಪಲಿ ಮೆಟ್ಟಿ ಇಳಿಯುತ್ತಿದ್ದವರು. ತಮ್ಮನ್ನು ತಾವು ಏನಂದುಕೊಂಡಿದ್ದರೋ ಗೊತ್ತಿಲ್ಲ, ಸಿಕ್ಕಾಗ ತುಂಬಾ ವ್ಯಂಗ್ಯವಾಗಿ ಮಾತನಾಡುತ್ತಿದ್ದರು. ಅರವಿಂದನು ಕಷ್ಟಪಟ್ಟು ಹಂತ ಹಂತವಾಗಿ ಸಾಧಿಸಿದ್ದ ಯಶಸ್ಸು ಊರವರ ಕಣ್ಣಿಗೆ ಬೀಳಲಿಲ್ಲ. ಹಾಲಿನ ಡೈರಿಯಲ್ಲಿ ಕುಳಿತುಕೊಂಡು ಊದಿನಕಡ್ಡಿ, ಕರ್ಪೂರಗಳನ್ನು ಮಾರುವುದರಿಂದ ತನ್ನ ವ್ಯಾವಹಾರಿಕ ಬದುಕನ್ನು ಪ್ರಾರಂಭಿಸಿದ್ದ. ನಂತರ ಅಡಿಕೆ ವ್ಯಾಪಾರಿಯಾಗಿದ್ದ ಚಿಕ್ಕಪ್ಪನಿಂದ ಹಣವನ್ನು ಎರವಲು ಪಡೆದುಕೊಂಡು ಚಿಕ್ಕದಾಗಿ ಕೊಳೆ ಅಡಿಕೆ ವ್ಯಾಪಾರ ಪ್ರಾರಂಭಿಸಿದ. ಊರಿನ ಪ್ರತಿ ಮನೆಯ ಬಾಗಿಲಿಗೂ ಹೋಗಿ ಚೌಕಾಸಿ ಮಾಡಿ ಕೊಳೆ ಅಡಿಕೆ ಕೊಳ್ಳುತ್ತಿದ್ದ. ಊರವರು ಅವನ ಚೌಕಾಸಿಗೆ ಬಯ್ದರೂ ರೆವನಕಟ್ಟೆ ವ್ಯಾಪಾರಿಗಳಿಗೆ ಕೊಳೆ ಅಡಿಕೆ ಕೊಡದೇ ಅರವಿಂದನಿಗೆ ಕೊಡುತ್ತಿದ್ದರು.

                ಕೊಳೆ ಅಡಿಕೆ ವ್ಯಾಪಾರದಿಂದ ನಿಧಾನವಾಗಿ ಅಡಿಕೆ ವ್ಯಾಪಾರಿಯಾದ. ಚಿಕ್ಕಪ್ಪನ ನೆರಳಿನಿಂದ ಹೊರಬಂದು ಸ್ವತಹ ಟೆಂಡರ್ ಬರೆಯುವಷ್ಟು ದೊಡ್ಡ ವ್ಯಾಪಾರಿಯಾಗಿ ಬೆಳೆದಿದ್ದ. ಸಿರ್ಸಿಯಲ್ಲಿಯೆ ಮನೆ ಮಾಡಿ ಅಸ್ತಮ ರೋಗಿಯಾಗಿದ್ದ ಅಪ್ಪನನ್ನು ಅಲ್ಲಿಯೇ ಕರೆಸಿಕೊಂಡಿದ್ದ. ಊರಿನಲ್ಲಿಯೇ ಇದ್ದು, ಸಾಧಿಸಿ ತೋರಿಸಿದ್ದ. ಇದು ನಮ್ಮೂರಿನ ಅನೇಕರ ಕಣ್ಣಿಗೆ ಉದಾಹರಿಸಬಹುದಾಗಿದ್ದ ಸಾಧನೆಯೇ ಅಲ್ಲ! ಪಿ ಯು ಸಿ ಮುಗಿದಾಗ ತನ್ನ ಓರಗೆಯ ವಯಸ್ಸಿನ ಹುಡುಗರೆಲ್ಲರೂ ಮುಂದಿನ ವಿದ್ಯಾಭ್ಯಾಸಕ್ಕೆ ಬೆಂಗಳೂರು, ಧಾರವಾಡ ಎಂದು ಹೋಗುತ್ತಿರಬೇಕಾದರೆ ಅವನು ಎಷ್ಟು ನೋವನ್ನು ಅನುಭವಿಸಿದ್ದನೊ? ಊದಿನ ಕಡ್ಡಿ ವ್ಯಾಪಾರ ಪ್ರಾರಂಭಿಸಿದಾಗ ಯಾರ್ಯಾರು ಎಷ್ಟು ಹೀಯಾಳಿಸಿದ್ದರೋ? ಕೊಳೆ ಅಡಿಕೆ ಕೊಳ್ಳುವಾಗ ಮಾಡಿದ ಚೌಕಾಸಿಯಿಂದಾಗಿ ಎಷ್ಟು ಬಯ್ಸಿಕೊಂಡಿದ್ದನೋ? ಆರ್ಥಿಕ ಮುಗ್ಗಟ್ಟು, ಅವಕಾಶದ ಕೊರತೆ ಹೀಗೆ ಅನೇಕ ಅಡೆತಡೆಗಳನ್ನು ಎದುರಿಸಿಯೂ ಊರಿನಲ್ಲಿದ್ದುಕೊಂಡೇ ಸಾಧಿಸಿದ.

                ಚೆಸ್ಸಿನಾಟದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಇಟ್ಟುಕೊಂಡಿದ್ದ. ಕವನಗಳನ್ನು ಬರೆಯುತ್ತಿದ್ದ. ಈಗೊಂದಷ್ಟು ದಿನಗಳ ಹಿಂದೆ ಅವನು ಬರೆದಿದ್ದ ಕಥೆ, ಕಾದಂಬರಿ ಮತ್ತು ಕವನ ಸಂಕಲನಗಳ ಪುಸ್ತಕ ಬಿಡುಗಡೆಯಾಗಿದ್ದವು. ಅವನ ಕವನಗಳಿಗೆ ಕುಶಾಲು ಮಾಡುತ್ತಿದ್ದರೂ ಅವನ ಬಗ್ಗೆ ಗೌರವವಿತ್ತು. ಊರಿನ ತೇರು, ದೀಪಾವಳಿ ಹಬ್ಬ ಹೀಗೆ ಕೆಲವುಸಲ ನಾನು ಊರಿಗೆ ಹೋದಾಗ ಸಿಗುತ್ತಿದ್ದ, ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದ. ಅಣ್ಣಯ್ಯನ ಬಗ್ಗೆ ವಿಚಾರಿಸುತ್ತಿದ್ದ.

ದೇವರು ಅವನ ಆತ್ಮಕ್ಕೆ ಶಾಂತಿ ನೀಡಲಿ. ಅವನ ಮನೆಯವರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.