Thursday, February 7, 2013

ಟೀನೇಜ್ ಸಂಸ್ಕೃತಿ


"ನಿನ್ನ ವಯಸ್ಸಿಗೆ ನಾನು ಮನೆಯ ಯಜಮಾನನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೆ" ಎಂದು ಅನೇಕ ಅಪ್ಪಂದಿರು ಈಗಿನ "ಟೀನೇಜ್" ವಯಸ್ಸಿನ ಹುಡುಗರಿಗೆ ಹೇಳುವ ಮಾತು. ನಾನೂ ಕೇಳಿಸಿಕೊಂಡಿದ್ದೇನೆ. ಅದು ಹೇಗೆ ನಮ್ಮ ಹಿಂದಿನ ತಲೆಮಾರಿನವರು ಈಗಿನ "ಟೀನೇಜ್" ವಯಸ್ಸಿಗೇ ಹುಡುಗಾಟವನ್ನು ಬಿಟ್ಟು ಜವಾಬ್ದಾರಿಗಳನ್ನು ಹೊರುವಷ್ಟು ಪ್ರೌಢರಾಗುತ್ತಿದ್ದರು? ತಮ್ಮ ೧೯-೨೦ ನೇ ವಯಸ್ಸಿನಲ್ಲಿ ಮನೆಯ ಯಜಮಾನಿಕೆ ವಹಿಸಿಕೊಂಡಿರುವವರ ಬಗ್ಗೆ ಕೇಳಿದ್ದೇನೆ, ೧೯ ನೇ ವಯಸ್ಸಿಗೇ ಅನಿವಾರ್ಯ ಕಾರಣಗಳಿಂದ ಮದುವೆಯಾಗಿ ಸಂಸಾರದ, ಇನ್ನೊಂದು ಜೀವದ ಜವಾಬ್ದಾರಿಯನ್ನು ತೆಗೆದುಕೊಂಡವರ ಬಗ್ಗೆ ಕೇಳಿದ್ದೇನೆ. ಆದರೆ ಈಗಿನ ತಲೆಮಾರಿನವರು ೨೫ ನೇ ವಯಸಿನಲ್ಲೂ ಭವಿಷ್ಯದ, ಮುಂದಿನ ಜೀವನದ ಬಗ್ಗೆ ಸ್ಪಷ್ಟವಾದ ಯೋಚನೆಯಿಲ್ಲದೆ "ಟೀನೇಜ್" ಎಂಬ ಮುಸುಕು ಹಾಕಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡುತ್ತಿರುವುದು ವಿಷಾದನೀಯ.

ನಮ್ಮ ಹಿಂದಿನ ತಲೆಮಾರಿನವರಿಗೆ ಪ್ರೌಢತ್ವ ಬೇಗನೆ ಬರುತ್ತಿತ್ತು ಕಾರಣ ಅನಿವಾರ್ಯತೆ. ಅವರಿಗೆ ಈಗಿನಂತೆ ತಮ್ಮ ೨೨-೨೩ ನೇ ವಯಸ್ಸಿನವರೆಗೆ ಶಾಲೆ ಕಾಲೇಜ್ ಎಂದು ಹೋಗುವ ಆರ್ಥಿಕ ಸ್ವಾತಂತ್ರ್ಯವಿರಲಿಲ್ಲ. ತಮ್ಮ ೧೩-೧೪ ನೇ ವಯಸ್ಸಿಗೇ ದುಡಿಮೆ ಪ್ರಾರಂಭವಾಗುತ್ತಿತ್ತು. ೧೯-೨೦ ನೇ ವಯಸ್ಸಿಗೆ ಸ್ವಲ್ಪ ಮಟ್ಟಿಗೆ ಹೊರಜಗತ್ತನ್ನ ನೋಡಿರುತ್ತಿದ್ದರು. ದುಡಿಮೆ, ಆದಾಯ, ಖರ್ಚು ಹೀಗೆ ವ್ಯವಹಾರ ಜ್ಞಾನ ಸಿಕ್ಕಿರುತ್ತಿತ್ತು. ಹಾಗಾದರೆ ಅವರಿಗೆ ಈಗಿನ "ಟೀನೇಜ್" ನವರಂತೆ ಭಾವನೆಗಳು ಇರುತ್ತಿರಲಿಲ್ಲವೇ? ಇರುತ್ತಿತ್ತು ಆದರೆ ಇವತ್ತು ದುಡಿದರೆ ನಾಳಿನ ಖರ್ಚಿಗೆ ಆದಾಯ ಅನ್ನುವಂತಿದ್ದರೆ ಭಾವನೆಗಳಿಗೆಲ್ಲಿ ಜಾಗ? ಅದನ್ನು ವ್ಯಕ್ತಪಡಿಸುವ ದಾರಿ ಇರಲಿಲ್ಲ.

ಈಗ ಬೆಂಗಳೂರು, ಮುಂಬೈ ಇಂತಹ ಶಹರದಲ್ಲಿರುವ ೪೦-೫೦ ವಯಸ್ಸಿನವರಲ್ಲಿ ಕೇಳಿ ನೋಡಿ, ಬಹಳಷ್ಟು ಜನ ತಮ್ಮ ಯೌವನದಲ್ಲಿ ಕಷ್ಟ ಪಟ್ಟೇ ಓದಿ, ಓದುತ್ತಾ ದುಡಿದು, ದುಡಿದು ಓದುತ್ತಾ ಈಗ ಒಳ್ಳೆಯ ರೀತಿಯಲ್ಲಿ ಜೀವನ ಮಾಡುತ್ತಿರುವವರೇ. ಪಾಕೆಟ್ ಮನಿ ಅಂದರೇನು ಅನ್ನುವುದೇ ಗೊತ್ತಿರದಿದ್ದ ಕಾಲವದು. "ನಾನು ಏನನ್ನಾದರೂ ಸಾಧಿಸಬೇಕು" ಅನ್ನುವುದೊಂದೇ ಆಗಿನವರ ತಲೆಯಲ್ಲಿರುತ್ತಿತ್ತು.

ಈಗ ಟೀನೇಜ್ ಪ್ರಾಯದವರು ಗೊತ್ತುಗುರಿಯಿಲ್ಲದೆ ಕಾಲೇಜ್ ಗೆ ಹೋಗಲು ಪ್ರಾರಂಭಿಸಿ ನಂತರ ಸ್ವಲ್ಪ ದಿನದಲ್ಲೇ ಬೇಜಾರಾಗಿ ಚಕ್ಕರ್ ಹೊಡೆಯುತ್ತಾರೆ. ಈ ಮೊಬೈಲ್ ಅಂತೂ ಎಲ್ಲರ ಕೈಯಲ್ಲಿ ಕುಣಿಯುತ್ತಿದೆ. ಅವಶ್ಯಕತೆಯಿದೆಯೋ ಇಲ್ಲವೋ ಎಲ್ಲರಿಗೂ ಮೊಬೈಲ್ ಬೇಕು. ಅದರಲ್ಲಿ ಮಾತು ಹರಟೆ ಮುಗಿಯುವುದೇ ಇಲ್ಲ. ಇನ್ನು ಗಂಭೀರವಾಗಿ ಓದಲು ಸಮಯವೆಲ್ಲಿ? ನಮಗೆ ನಮ್ಮ ಅಪ್ಪಂದಿರು ಯಾವುದೇ ಜವಾಬ್ದಾರಿಗಳನ್ನು ನೀಡದೆ ಕೇಳಿದಷ್ಟು ಹಣವನ್ನು ಕೊಟ್ಟು ಓದಲು ಕಾಲೇಜ್ ಗೆ ಕಳಿಸುತ್ತಿದ್ದರೆ ನಾವು ಮಾಡುತ್ತಿರುವುದೇನು? ಫ್ರೆಂಡ್ಸ್ ಅಂತ ಹೇಳಿ ಯಾರ್ಯಾರದೋ ಹತ್ತಿರ ದಿನಗಟ್ಟಲೆ ಹರಟುವುದು, ತಂದೆ ತಾಯಿ ಸ್ವಲ್ಪ ವಿಚಾರಿಸಿದರೆ ದಿನಗಟ್ಟಲೆ ಊಟ ಬಿಟ್ಟು ಕೂರುವುದು.

ಟೀನೇಜ್ ಗೆಳೆಯರೇ ನಾವೂ ಪ್ರೌಢರಾಗೋಣ. ಯಾರದೋ ಮುಗುಳ್ನಗೆಯನ್ನು, ಗೆಳೆಯ/ಗೆಳತಿ ಕೊಟ್ಟ ಫ್ರೆಂಡ್ಶಿಪ್ ಕಾರ್ಡನ್ನು ಅಥವಾ ಇಂತಹ ಸನ್ನಿವೇಷಗಳನ್ನು ವೈಭವೀಕರಿಸುವುದನ್ನು ನಿಲ್ಲಿಸೋಣ. ಅಪ್ಪ ಕೊಡುವ ಪಾಕೆಟ್ ಮನಿಯನ್ನು ಅಪ್ಪ ಹೇಗೆ ದುಡಿದ ಎಂದು ಯೋಚಿಸೋಣ. ನಮ್ಮ ಭವಿಷ್ಯದ ಬಗ್ಗೆ ಸ್ಪಷ್ಟಪಡಿಸಿಕೊಳ್ಳೋಣ. ನಮ್ಮ ಅಪ್ಪ ಅಮ್ಮಂದಿರ ಬಗ್ಗೆ ಗೌರವಯುತವಾಗಿ ವರ್ತಿಸೋಣ. ನಾವು ಚಿಟ್ಟೆಯಾಗಿ ಬೆಳೆದಿದೇವೆ, ಇನ್ನು ಹಾರಾಡೋಣ. "ಟೀನೇಜ್", "ಮನಸುಗಳ ಪಿಸು ಮಾತು" ಇವೇ ಮುಂತಾದ ಶಬ್ಧಗಳನ್ನು ಬಳಸಿ ಸುಂದರ ಲೇಖನ ಬರೆಯಬಹುದು. ಸಾಧನೆ ವ್ರತ್ತಿಪರತೆಯನ್ನು ಬಯಸುತ್ತದೆ, ಏಕಾಗ್ರತೆಯನ್ನು ಬಯಸುತ್ತದೆ. ಗೆಳೆಯರೇ ಬನ್ನಿ ವ್ರತ್ತಿಪರರಾಗೋಣ. ಇದೇ ರೀತಿ ಇದ್ದರೆ ನಮ್ಮ ಅಪ್ಪ ಯೌವನದಲ್ಲಿ ಸಾಧಿಸಿದ್ದನ್ನು ನಮ್ಮ ಇಡಿ ಜೀವಮಾನದಲ್ಲಿ ಸಾಧಿಸಲಾಗುವುದಿಲ್ಲ.