Friday, November 15, 2013

ಅನಿರೀಕ್ಷಿತ ಭೇಟಿಗಳು..

ಕೆಲವು ಸಲ ಅನಿರೀಕ್ಷಿತವಾಗಿ ಅಪರೂಪದವರು ಸಿಕ್ಕಿದರೆ ಅದೆಷ್ಟು ಗೊಂದಲವಾಗುತ್ತದೆ ಅನ್ನುವುದನ್ನು ಅನುಭವಿಸಿದ್ದೀರಾ? ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಅನ್ನುವುದು ಗೊತ್ತಾಗದೆ ಒದ್ದಾಡುವುದು, ನಗು ಬರದಿದ್ದರೂ ನಗುವುದು ಇವನ್ನೆಲ್ಲ ಅನುಭವಿಸಿಯೇ ನೋಡಬೇಕು. ಬಹುಷಃ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಇದರ ಅನುಭವ ಆಗಿಯೇ ಇರುತ್ತದೆ. ಕೆಲವರು ತಡಬಡಾಯಿಸಿದರೆ ಕೆಲವರು ಹೇಗೋ ನಿಭಾಯಿಸಿಬಿಡುತ್ತಾರೆ. ಬೇಡದ ಜಾಗದಲ್ಲಿ, ಬೇಡದ ಸಂದರ್ಭದಲ್ಲಿ ಸಿಕ್ಕರಂತು ಮುಖ ಹುಳ್ಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು.

ನಮ್ಮ ಸುತ್ತಲಿನ ಊರಿಗೆಲ್ಲ ಹೆಸರುವಾಸಿಯಾದ ಮನೆಯೊಂದಿದೆ. ಪುಂಖಾನುಪುಂಖವಾಗಿ ಯಾವ ವಿಷಯದ ಬಗ್ಗೆಯಾದರೂ ಯಾರಿಗೆ ಬೇಕಾದರೂ ಕಂಡಕಂಡಲ್ಲಿ ಭಾಷಣ ಬಿಗಿಯುವುದರಲ್ಲಿ ಅವರು ನಿಸ್ಸೀಮರು. ಮದುವೆ ಮುಂಜಿಗೆ ಆಮಂತ್ರಣ ಕೊಡಲು ಅವರ ಮನೆಗೆ ಹೋಗೋಣವೆಂದರೆ ಕೆಲವರು ಅದನ್ನು ತಮ್ಮ ಕೊಲೆಯ ಸಂಚೆನೋ ಅನ್ನುವಂತೆ ಬೆಚ್ಚುತ್ತಾರೆ. ಯಾರಾದರೂ ಅವರ ಮನೆಗೆ ಹೋದರೆ ಸಾಕು, ಕುದಿಯುತ್ತಿರುವ ಚಹಾ ಎದುರಿಗಿಟ್ಟು ಅದು ಆರುವವರೆಗೂ ಇಡೀ ಮನೆಯವರೆಲ್ಲ ಸೇರಿ ಮೆದುಳಿಗೆ ಕೈ ಹಾಕಿ ಕಲಸಿಬಿಡುತ್ತಾರೆ. ಅಲ್ಲಿಂದ ಹೊರಬಂದಮೇಲೆ ಜಗತ್ತಿನ ವೈಶಾಲ್ಯ ಹಾಗು ಶಾಂತತೆಯ ಪರಿಚಯ ಸರಿಯಾಗಿ ಆಗಿ ಅವುಗಳ ಮಹತ್ವ ತಿಳಿಯುತ್ತದೆ.

ಹಿಂದಿನವಾರ ನನ್ನ ಗೆಳೆಯನೊಬ್ಬನಿಗೆ "ಆ" ಮನೆಯವರಿಬ್ಬರು ಬೆಂಗಳೂರಿನಲ್ಲಿ ಸಿಕ್ಕಿದ್ದರಂತೆ. ರಸ್ತೆಯಲ್ಲೆಲ್ಲೋ ಇವನು ಹೋಗುತ್ತಿರುವಾಗ ಅಚಾನಕ್ಕಾಗಿ ಅವರಿಬ್ಬರೂ ಎದುರಿಗೆ ಪ್ರತ್ಯಕ್ಷವಾದಾಗ ಎನುಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾದನಂತೆ. ಒಂದೇ ಊರಿನವರು ಆದದ್ದರಿಂದ ಎದುರಿಗೆ ಸಿಕ್ಕಾಗ ಮಾತನಾಡಿಸುವು ಸೌಜನ್ಯ. ಉಭಯಕುಶಲೋಪರಿ ಮಾತುಕತೆಯಾದಮೇಲೆ ಮನೆಯೆಲ್ಲಿ ಇದೆ ಎಂದು ಅವರು ಕೇಳಿದಾಗಲೇ ಪರಿಸ್ಥಿತಿಯ ಗಹನತೆ ಅವನ ಅರಿವಿಗೆ ಬಂದಿದ್ದು. ಯಾವುದೋ ಮಾತಿನ ಭರದಲ್ಲಿ ಮನೆಯ ವಿಳಾಸವನ್ನು ಹೇಳದೆ, ತಲೆಹೋಗುವಂತ ಕೆಲಸವನ್ನೇನೋ ಆರೋಪಿಸಿಕೊಂಡು ಅಲ್ಲಿಂದ ಕಾಲ್ಕಿತ್ತನಂತೆ. ಅಂತಹ ಸಂದರ್ಭದಲ್ಲೂ ಸಹ ಅವನಿಗೆ ನನ್ನ ಮನೆಯ ವಿಳಾಸವನ್ನು ಕೊಡುವ ಆಲೋಚನೆ ಬಂದಿತ್ತಂತೆ. ನಾನು ತೀರ್ಮಾನಿಸಿದ್ದೇನೆ, ಯಾರಿಗೂ ನನ್ನ ಮನೆಯ ವಿಳಾಸವನ್ನು ಮಾತ್ರಾ ಕೊಡಬಾರದೆಂದು.

ಕೆಲವುಸಲ ಅಪರೂಪಕ್ಕೆ ಸಿಕ್ಕವರ ಹೆಸರು ನೆನಪಿನಲ್ಲಿರುವುದಿಲ್ಲ. ಆಗ ನೆನಪಿಸಿಕೊಳ್ಳುವುದಕ್ಕೆ ಒದ್ದಾಡಬೇಕು. ಆಗ ಹೆಂಡತಿಯನ್ನು ಕರೆದು "ಇಲ್ಲಿ ನೋಡು ಯಾರು ಸಿಕ್ಕಿದ್ದಾರೆಂದು!!" ಹೇಳಿ ಅವಳಿಗೆ ಏನಾದರು ಸಿಕ್ಕವರ ಹೆಸರು ಗೊತ್ತಿದೆಯೋ ಎಂದು ಕೇಳುವುದು. "ಅರೆ ನೀನು!! ನಿನ್ನನ್ನು ಮರೆಯುವುದಕ್ಕೆ ಸಾಧ್ಯವಾ.." ಎಂದು ಹುಳಿ ಹುಳಿ ನಗೆಯಾಡುವುದು, ಇಂತಹ ಚೇಷ್ಟೆಗಳು ಸಾಮಾನ್ಯ. ನಾನಂತೂ ಸಿಕ್ಕವರ ಮುಖಕ್ಕೆ ಯಾವ ಹೆಸರು ಹೊಂದುತ್ತದೆ ಎಂದು ನೋಡಿ ಯಾವುದೋ ಒಂದು ಹೆಸರನ್ನು ಹೇಳಿಬಿಡುತ್ತೇನೆ ಅಮೇಲಾಗುವ ಪರಿಣಾಮಗಳಿಗೆ ಸಿದ್ದನಾಗಿಯೇ. ಕೆಲವರಂತೂ "ನಾನು ಯಾರು ಹೇಳು ನೋಡೋಣ" ಅಂತ ತಲೆ ಬಿಸಿ ಮಾಡುತ್ತಾರೆ. ಪಕ್ಕದ ಮನೆಯ ಚಿಕ್ಕಪ್ಪನೊಬ್ಬನಿದ್ದಾನೆ ಅವನು ಯಾರಿಗೆ ಯಾವ ಹೆಸರನ್ನು ಬೇಕಾದರೂ ಹೇಳುತ್ತಾನೆ. ಒಮ್ಮೆ ಅವರ ಮನೆಗೆ ಬಂದ ಅತ್ತಿಗೆಯೊಬ್ಬರಿಗೆ "ವಿನಾಯಕ ಅಕ್ಕ" ಅಂತ ಕರೆದುಬಿಟ್ಟಿದ್ದ. ಹತ್ತೆಂಟು ನೆಂಟರಿಷ್ಟರ ಹೆಸರೇ ನಮಗೆ ನೆನಪಿರುವುದಿಲ್ಲ, ಇನ್ನು ವೈದ್ಯರು ಹೇಗೆ ನೂರಾರು ಔಷಧಿಗಳ ಹೆಸರನ್ನು ನೆನಪಿಟ್ಟುಕೊಳ್ಳುತ್ತಾರೆ?

ಅನಿರೀಕ್ಷಿತವಾಗಿ ಅತ್ಮೀಯರೋ, ಬೇಕಾದ ಬಂಧುಗಳೋ ಸಿಕ್ಕರೆ ಆಗುವ ಸಂತೋಷವೂ ಸಹ ಅಪ್ರಮತಿಮ. 
ಇಂತಹ ವೇಗದ ಜೀವನದಲ್ಲಿ ಭೇಟಿ ಮಾಡಬೇಕೆಂದು ಆಲೋಚಿಸುತ್ತಿರಬೇಕಾದರೆ ಹಠಾತ್ತಾಗಿ ಸಿಗಬೇಕಾದವರು ಸಿಕ್ಕಿ ನಮ್ಮ ಜೊತೆ ಸಮಯ ಕಳೆದರೆ ತುಂಬಾ ಆನಂದವಾಗುತ್ತದೆ.

Thursday, August 22, 2013

ಮೂರ್ತಿ


ಮೂರ್ತಿ ತುಂಬಾ ಒಳ್ಳೆಯ ಮನುಷ್ಯ. ಅವನು ಚಿಕ್ಕವನಿರುವಾಗಿನಿಂದ ನನಗೆ ಗೊತ್ತು. ಚಿಕ್ಕವನಿರುವಾಗ ಅವನು ಎಷ್ಟು ಮುದ್ದಾಗಿದ್ದನೆಂದರೆ ಯಾರೂ ಅವನ ಕೆನ್ನೆ ಚಿವುಟದೆ ಮಾತನಾಡಿಸುತ್ತಿರಲಿಲ್ಲ. ಗುಣದಲ್ಲೂ ಸಹ ತುಂಬಾ ಸೌಮ್ಯ ಸ್ವಭಾವದ ಮಾಣಿಯಾಗಿದ್ದ. ಉಳಿದ ಮಕ್ಕಳಂತೆ ವಿನಾಕಾರಣ ಹಠ, ರಗಳೆ ಯಾವುದೂ ಇರಲಿಲ್ಲ. ಲಿಗಾಡಿ ಅನ್ನುವುದನ್ನಂತೂ ಮಾಡಿಯೇ ಇಲ್ಲ ಅನ್ನಬಹುದು.

ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ. ಹೈ ಸ್ಕೂಲ್ ಮುಗಿಯುವವರೆಗೂ ಶಾಲೆಗೇ ಅವನೇ ಮೊದಲಿಗ. ಓರಗೆಯ ಹುಡುಗರಂತೆ ಶಾಲೆಯಿಂದ ಬಂದ ತಕ್ಷಣ ಪಾಟಿಚೀಲವನ್ನು ಎಲ್ಲೋ ಒಗೆದು ಆಡಲು ಓಡುವ ಹುಡುಗನಾಗಿರಲಿಲ್ಲ. ಸ್ವಲ್ಪ ಏನನ್ನಾದರೂ ತಿಂದು, ಶಾಲೆಯಲ್ಲಿ ಕೊಟ್ಟ ಬರವಣಿಗೆಯನ್ನೂ, ಕೆಲಸವನ್ನೂ ಮುಗಿಸಿಯೇ ಏಳುತ್ತಿದ್ದ. ನೆಂಟರಿಷ್ಟರು ತಮ್ಮ ಮಕ್ಕಳಿಗೆ ಬಯ್ಯುವಾಗ "ಮೂರ್ತಿಯನ್ನು ನೋಡಿ ಕಲಿತುಕೋ" ಎನ್ನುವುದು ಮಾಮೂಲಾಗಿತ್ತು.

ಪಿ ಯು ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾಗಿ, ಇಂಜಿನಿಯರಿಂಗ್ ಕೋರ್ಸ್ ಗೆ ಸೇರಿ ಯಶಸ್ವಿಯಾಗಿ ಮುಗಿಸಿ ಈಗ ವಿದೇಶದ ಯಾವುದೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಳ್ಳೆಯ ಸಂಬಳ ತೆಗೆದುಕೊಳ್ಳುತ್ತಿದ್ದಾನೆ. ಮನೆ ಕಾರು ಎಲ್ಲ ಇದೆ. ತಂದೆ ತಾಯಿಗೆ ಇದಕ್ಕಿಂತ ಖುಷಿ ಬೇಕೇ? ಒಂದು ಒಳ್ಳೆಯ ಕೂಸು ಹುಡುಕಿ ಅವನ ಮದುವೆ ಮಾಡಿಬಿಟ್ಟರೆ ತಂದೆ ತಾಯಿ ಆರಾಮಾಗಿರಬಹುದು. ನಿಮಗೆ ಗೊತ್ತಿದ್ದ ಹಾಗೆ ಯಾವುದಾದರೂ ಕೂಸು ಇದೆಯೇ?



Thursday, July 11, 2013

ಬುತ್ತಿ

ಜೋರಾಗಿ ಮಳೆ ಬರುತ್ತಿತ್ತು, ಆಕಾಶ ಕಪ್ಪಾಗಿ ಮನೆಯೊಳಗೂ ಕತ್ತಲು ಇರುವಂತೆ ಮಾಡಿತ್ತು. ಯಾಕೋ ಬಹಳ ದಿನಗಳ ನಂತರ ಒಬ್ಬನೇ ಕೂತು ಏಕಾಂತವನ್ನು ಅನುಭವಿಸುವ ಆಸೆಯಾಗಿತ್ತು. ಏನು ಇಲ್ಲ ಸುಮ್ಮನೆ ನಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವುದು, ಮುಂದಿನ ಕನಸುಗಳಿಗೆ ತೇಪೆ ಹಚ್ಚುವುದೇ ನನ್ನ ಆಸೆಯಾಗಿತ್ತು. ಯಾವ್ಯಾವುದೋ ನೆನಪುಗಳು, ಯಾರದೋ ಮಾತುಗಳು ಎಲ್ಲವು ಒಟ್ಟಿಗೆ ತಲೆಯಲ್ಲಿ ಬಂದು ಜಡಕಾಗಿ ಹೋಯಿತು. ಸರಿ, ಕ್ರಮಬಧ್ಧವಾಗಿ ಬಾಲ್ಯದಿಂದ ನೆನಪಿಸಿಕೊಳ್ಳೋಣ ಎಂದು ಪ್ರಾರಂಭಿಸಿದೆ. ಅನುಕ್ರಮವಾಗಿ ಬರಲು ಅದೇನು ತಿಂಗಳ ಸಂಬಳವಾ?

ನನಗೆ ನಿದ್ದೆ ಬರುವವರೆಗೂ ಪಕ್ಕದಲ್ಲೇ ಮಲಗಿ ನನ್ನ "ಎಂತಕ್ಕೆ" ಎನ್ನುವ ಅಸಂಬಧ್ಧ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕೊಡುತ್ತಿದ್ದ "ಅಣ್ಣ". ನನಗೆ ಕತ್ತಲೆಯೆಂದರೆ ಭಯಂಕರ ಹೆದರಿಕೆಯಿತ್ತು. ರಾತ್ರಿ ಮೂತ್ರ ಬಂದು ಎಚ್ಚರವಾದಾಗ ಅಣ್ಣನ ಕೋಣೆಯ ಬಾಗಿಲ ಬಳಿ ನಿಂತು "ಅಣ್ಣಾ ಓ ಅಣ್ಣಾ" ಎಂದು ಕರೆದಾಗ ಅಲ್ಲೇ ಮಲಗಿರುವ ಅಣ್ಣಯ್ಯ, ಭಾವ ಎಲ್ಲರೂ ಬಯ್ಯುತ್ತಿದ್ದರು. ಈಗ ಮಲಗಿರುವಾಗ ಯಾರದ್ದಾದರೂ ಫೋನ್ ಬಂದರೆ ಅದೇನು ಅಲವರಿಕೆ ನನಗೆ. ಒಂದು ದಿನವೂ ಅಣ್ಣ "ನೀನೆ ಹೋಗಿ ಮೂತ್ರ ಮಾಡಿ ಬಾ, ನನ್ನ ಎಬ್ಬಿಸಬೇಡ" ಎಂದದ್ದಿದೆಯೇ?

ಆಗ ಸಣ್ಣವನಿದ್ದೆ. ನಮ್ಮೂರಿನ ಪ್ರೌಢ ಶಾಲೆಯ ವಾರ್ಷಿಕೋತ್ಸವಕ್ಕೆ ನೀನು ಹೋಗುವುದು ಬೇಡ ಎಂದು ಮನೆಯವರೆಲ್ಲರೂ ಹೇಳುತ್ತಿದ್ದರೂ, ದೊಡ್ಡಣ್ಣ, ಹತ್ತನೇ ತರಗತಿಯಲ್ಲಿ ಓದುತ್ತಿದ್ದ, ಬೆನ್ನಿನ ಮೇಲೆ "ಉಪ್ಪಿನ ಮೊಟ್ಟೆ" ಮಾಡಿಕೊಂಡು ಕರೆದುಕೊಂಡು ಹೋಗಿದ್ದ. ಮೂರೂವರೆ ಕಿ ಮಿ ಹೊತ್ತುಕೊಂಡು ಹೋಗಿದ್ದ. ಆಗಿನ ಸಂತೋಷ ತಿರುಗಿ  ಬರಬಹುದಾ? ಬಹುಷಃ ಅಣ್ಣನಿಗೂ ಈ ಘಟನೆ ನೆನಪಿರಲಿಕ್ಕಿಲ್ಲ.

ಶಾಲೆಯ ರಜಾ ದಿನಗಳಲ್ಲಿ ಮನೆಗೆ ಬಂದ ಅತ್ತೆಯರ ಮಕ್ಕಳೊಡನೆ ಹೊಳೆಗೆ ಹೋಗಿ ಪಂಜಿಯ ತುಂಡಿನಲ್ಲಿ ಅವಲಕ್ಕಿ ಹಾಕಿಕೊಂಡು ಮೀನು ಹಿಡಿಯುವ ಸಂಭ್ರಮವನ್ನು ಹೇಗೆ ವರ್ಣಿಸಲಿ. ಹದಿನೈದಿಪ್ಪತ್ತು ದಿನ ವಯಸ್ಸಿನ ನಾಯಿ ಮರಿಗಳನ್ನು ಈಜು ಕಲಿಸೋಣವೆಂದು ಹೊಳೆಗೆ ತೆಗೆದುಕೊಂಡು ಹೋಗಿ ತೇಲಿಬಿಡುವುದರಲ್ಲಿದ್ದಾಗ ಕಂಡ ಅಜ್ಜನ ಹತ್ತಿರ ಬೈಸಿಕೊಂಡಾಗ ಅದ ಅವಮಾನ ಲೆಕ್ಕಕ್ಕೆ ಸಿಗುವುದೇ? ಆಯಿ ಹಾಲು ಹಿಂಡುವಾಗ ದೊಣಕಲಿನಲ್ಲಿ ನಿಂತುಕೊಂಡು ಮಾತನಾಡುತ್ತಾ ಆಕಳ ಕಿವಿ ತಿರುಪಿ ಅದು ಆಯಿಗೆ ಒದ್ದಾಗ ಆದ ಭಯ ಪುನರಾವರ್ತನೆ ಆಗುವುದೇ?

ಏಳನೇ ತರಗತಿಯಲ್ಲಿದ್ದಾಗ ಕೇಂದ್ರ ಮಟ್ಟದ ಭಾಷಣ ಸ್ಫರ್ದೆಯಲ್ಲಿ ಪ್ರಥಮ ಬಹುಮಾನ ಗೆದ್ದಾಗ ಆದ ಖುಷಿ, ಹತ್ತನೇ ತರಗತಿಯಲ್ಲಿ ಇದ್ದಾಗ ವಾರ್ಷಿಕೋತ್ಸವದ ದಿನ ಮಾಡಿದ ನಾಟಕದ ಪಾತ್ರ ನಿರೀಕ್ಷೆಗೂ ಮೀರಿ ಜನಪ್ರಿಯವಾದಾಗ ಆದ ಹೆಮ್ಮೆ ನೆನಪಿನಲ್ಲಿ ಕಚಗುಳಿ ಇಡುತ್ತವೆ. ಪ್ರೌಢಶಾಲೆಯಲ್ಲಿರುವಾಗಿನ ಕ್ರಿಕೆಟ್ ಹುಚ್ಚು ಬಾಲಿಶ ಎನಿಸುತ್ತದೆ. ಕುಳ್ಳಗಿದ್ದುದರಿಂದ ಪ್ರಾರ್ಥನೆ ಮಾಡುವಾಗ ಸಾಲಿನಲ್ಲಿ ಎದುರಿಗೆ ನಿಲ್ಲುವಾಗ ಬರುತ್ತಿದ್ದ ಆಕ್ರೋಶ ಯಾರಮೇಲಿನದೋ? ಹೈ ಸ್ಕೂಲ್ ನಿಂದ ಮನೆಗೆ ಹೋಗುವಾಗ ಕೆಲವೊಮ್ಮೆ ವಿ ಡಿ ಅಂಗಡಿಯಿಂದ ಕೊಳ್ಳುತ್ತಿದ್ದ ಶೇಂಗಾ, ಶುಂಟಿ ಪೆಪ್ಪರಮೆಂಟ್ ರುಚಿ ಮರೆಯಲಾಗುವುದೇ?

ವಿಜ್ಹ್ನಾನವೆಂದರೇನು ವಾಣಿಜ್ಯವೆಂದರೇನು ಗೊತ್ತಿಲ್ಲದೇ ಪಿ ಯು ಸಿ ಯಲ್ಲಿ ವಿಜ್ಹ್ನಾನ ಆರಿಸಿಕೊಂಡು ಮೊದಲ ವರ್ಷ ನಪಾಸಾದಾಗ ಆದ ಅವಮಾನ, ಕೀಳರಿಮೆ, ಭವಿಷ್ಯದ ಬಗೆಗಿನ ಹೆದರಿಕೆ ಏಕೆ ನೆನಪಾಗುತ್ತದೋ? ನಂತರ ವಾಣಿಜ್ಯವನ್ನು ತೆಗೆದುಕೊಂಡು ಪ್ರಥಮ ವರ್ಷ ಪ್ರತಿಶತ ೮೦ ಅಂಕಗಳನ್ನು ತೆಗೆದುಕೊಂಡಾಗ ಏನೋ ಪ್ರತಿಕಾರ ತೀರಿಸಿಕೊಂಡ ಭಾವ, ಬೇಕಿತ್ತಾ ಅನಿಸುತ್ತದೆ.

ಸಣ್ಣವನಿದ್ದಾಗಿನಿಂದ ಇಲ್ಲಿಯವರೆಗೂ ಪಡೆದುಕೊಂಡ ಸಹಾಯಗಳೆಷ್ಟೋ.. ಅತ್ತೆಯ ಮಗಳು ಅತ್ತಿಗೆಯಿಂದ ಗಂಟೆ ನೋಡುವುದು ಕಲಿತೆ, ಭಾವನಿಂದ ಮಗ್ಗಿ ಕಲಿತೆ, ಅಣ್ಣಯ್ಯನಿಂದ ಲೆಕ್ಕ ಕಲಿತೆ... ಇನ್ನೂ ಎಷ್ಟೆಷ್ಟೋ ಜನರಿಂದ ನಾ ನಾ ರೀತಿಯಿಂದ ಉಪಕೃತನಾಗಿದ್ದೇನೆ. ಅವರೆಲ್ಲರಿಗೂ ಧನ್ಯವಾದ ಹೇಳುವ ಮನಸ್ಸಾಗಿದೆ...

ಏನೇ ಹೇಳಿ "ಬೀಚಿ"ಯ ಮಾತು ನಿಜವೆನ್ನಿಸುತ್ತದೆ. ಸಂತೋಷ ಎನ್ನುವುದು "ನೆನಪುಗಳಲ್ಲಿರುತ್ತದೆ". ನೆನಪುಗಳ ಜೊತೆ ಹೊತ್ತು ಕಳೆದಮೇಲೆ ಎಷ್ಟು ಮುದವೆನ್ನಿಸುತ್ತದೆ.. ಅಲ್ಲವೇ?

Thursday, February 7, 2013

ಟೀನೇಜ್ ಸಂಸ್ಕೃತಿ


"ನಿನ್ನ ವಯಸ್ಸಿಗೆ ನಾನು ಮನೆಯ ಯಜಮಾನನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೆ" ಎಂದು ಅನೇಕ ಅಪ್ಪಂದಿರು ಈಗಿನ "ಟೀನೇಜ್" ವಯಸ್ಸಿನ ಹುಡುಗರಿಗೆ ಹೇಳುವ ಮಾತು. ನಾನೂ ಕೇಳಿಸಿಕೊಂಡಿದ್ದೇನೆ. ಅದು ಹೇಗೆ ನಮ್ಮ ಹಿಂದಿನ ತಲೆಮಾರಿನವರು ಈಗಿನ "ಟೀನೇಜ್" ವಯಸ್ಸಿಗೇ ಹುಡುಗಾಟವನ್ನು ಬಿಟ್ಟು ಜವಾಬ್ದಾರಿಗಳನ್ನು ಹೊರುವಷ್ಟು ಪ್ರೌಢರಾಗುತ್ತಿದ್ದರು? ತಮ್ಮ ೧೯-೨೦ ನೇ ವಯಸ್ಸಿನಲ್ಲಿ ಮನೆಯ ಯಜಮಾನಿಕೆ ವಹಿಸಿಕೊಂಡಿರುವವರ ಬಗ್ಗೆ ಕೇಳಿದ್ದೇನೆ, ೧೯ ನೇ ವಯಸ್ಸಿಗೇ ಅನಿವಾರ್ಯ ಕಾರಣಗಳಿಂದ ಮದುವೆಯಾಗಿ ಸಂಸಾರದ, ಇನ್ನೊಂದು ಜೀವದ ಜವಾಬ್ದಾರಿಯನ್ನು ತೆಗೆದುಕೊಂಡವರ ಬಗ್ಗೆ ಕೇಳಿದ್ದೇನೆ. ಆದರೆ ಈಗಿನ ತಲೆಮಾರಿನವರು ೨೫ ನೇ ವಯಸಿನಲ್ಲೂ ಭವಿಷ್ಯದ, ಮುಂದಿನ ಜೀವನದ ಬಗ್ಗೆ ಸ್ಪಷ್ಟವಾದ ಯೋಚನೆಯಿಲ್ಲದೆ "ಟೀನೇಜ್" ಎಂಬ ಮುಸುಕು ಹಾಕಿಕೊಂಡು ವ್ಯರ್ಥವಾಗಿ ಕಾಲಹರಣ ಮಾಡುತ್ತಿರುವುದು ವಿಷಾದನೀಯ.

ನಮ್ಮ ಹಿಂದಿನ ತಲೆಮಾರಿನವರಿಗೆ ಪ್ರೌಢತ್ವ ಬೇಗನೆ ಬರುತ್ತಿತ್ತು ಕಾರಣ ಅನಿವಾರ್ಯತೆ. ಅವರಿಗೆ ಈಗಿನಂತೆ ತಮ್ಮ ೨೨-೨೩ ನೇ ವಯಸ್ಸಿನವರೆಗೆ ಶಾಲೆ ಕಾಲೇಜ್ ಎಂದು ಹೋಗುವ ಆರ್ಥಿಕ ಸ್ವಾತಂತ್ರ್ಯವಿರಲಿಲ್ಲ. ತಮ್ಮ ೧೩-೧೪ ನೇ ವಯಸ್ಸಿಗೇ ದುಡಿಮೆ ಪ್ರಾರಂಭವಾಗುತ್ತಿತ್ತು. ೧೯-೨೦ ನೇ ವಯಸ್ಸಿಗೆ ಸ್ವಲ್ಪ ಮಟ್ಟಿಗೆ ಹೊರಜಗತ್ತನ್ನ ನೋಡಿರುತ್ತಿದ್ದರು. ದುಡಿಮೆ, ಆದಾಯ, ಖರ್ಚು ಹೀಗೆ ವ್ಯವಹಾರ ಜ್ಞಾನ ಸಿಕ್ಕಿರುತ್ತಿತ್ತು. ಹಾಗಾದರೆ ಅವರಿಗೆ ಈಗಿನ "ಟೀನೇಜ್" ನವರಂತೆ ಭಾವನೆಗಳು ಇರುತ್ತಿರಲಿಲ್ಲವೇ? ಇರುತ್ತಿತ್ತು ಆದರೆ ಇವತ್ತು ದುಡಿದರೆ ನಾಳಿನ ಖರ್ಚಿಗೆ ಆದಾಯ ಅನ್ನುವಂತಿದ್ದರೆ ಭಾವನೆಗಳಿಗೆಲ್ಲಿ ಜಾಗ? ಅದನ್ನು ವ್ಯಕ್ತಪಡಿಸುವ ದಾರಿ ಇರಲಿಲ್ಲ.

ಈಗ ಬೆಂಗಳೂರು, ಮುಂಬೈ ಇಂತಹ ಶಹರದಲ್ಲಿರುವ ೪೦-೫೦ ವಯಸ್ಸಿನವರಲ್ಲಿ ಕೇಳಿ ನೋಡಿ, ಬಹಳಷ್ಟು ಜನ ತಮ್ಮ ಯೌವನದಲ್ಲಿ ಕಷ್ಟ ಪಟ್ಟೇ ಓದಿ, ಓದುತ್ತಾ ದುಡಿದು, ದುಡಿದು ಓದುತ್ತಾ ಈಗ ಒಳ್ಳೆಯ ರೀತಿಯಲ್ಲಿ ಜೀವನ ಮಾಡುತ್ತಿರುವವರೇ. ಪಾಕೆಟ್ ಮನಿ ಅಂದರೇನು ಅನ್ನುವುದೇ ಗೊತ್ತಿರದಿದ್ದ ಕಾಲವದು. "ನಾನು ಏನನ್ನಾದರೂ ಸಾಧಿಸಬೇಕು" ಅನ್ನುವುದೊಂದೇ ಆಗಿನವರ ತಲೆಯಲ್ಲಿರುತ್ತಿತ್ತು.

ಈಗ ಟೀನೇಜ್ ಪ್ರಾಯದವರು ಗೊತ್ತುಗುರಿಯಿಲ್ಲದೆ ಕಾಲೇಜ್ ಗೆ ಹೋಗಲು ಪ್ರಾರಂಭಿಸಿ ನಂತರ ಸ್ವಲ್ಪ ದಿನದಲ್ಲೇ ಬೇಜಾರಾಗಿ ಚಕ್ಕರ್ ಹೊಡೆಯುತ್ತಾರೆ. ಈ ಮೊಬೈಲ್ ಅಂತೂ ಎಲ್ಲರ ಕೈಯಲ್ಲಿ ಕುಣಿಯುತ್ತಿದೆ. ಅವಶ್ಯಕತೆಯಿದೆಯೋ ಇಲ್ಲವೋ ಎಲ್ಲರಿಗೂ ಮೊಬೈಲ್ ಬೇಕು. ಅದರಲ್ಲಿ ಮಾತು ಹರಟೆ ಮುಗಿಯುವುದೇ ಇಲ್ಲ. ಇನ್ನು ಗಂಭೀರವಾಗಿ ಓದಲು ಸಮಯವೆಲ್ಲಿ? ನಮಗೆ ನಮ್ಮ ಅಪ್ಪಂದಿರು ಯಾವುದೇ ಜವಾಬ್ದಾರಿಗಳನ್ನು ನೀಡದೆ ಕೇಳಿದಷ್ಟು ಹಣವನ್ನು ಕೊಟ್ಟು ಓದಲು ಕಾಲೇಜ್ ಗೆ ಕಳಿಸುತ್ತಿದ್ದರೆ ನಾವು ಮಾಡುತ್ತಿರುವುದೇನು? ಫ್ರೆಂಡ್ಸ್ ಅಂತ ಹೇಳಿ ಯಾರ್ಯಾರದೋ ಹತ್ತಿರ ದಿನಗಟ್ಟಲೆ ಹರಟುವುದು, ತಂದೆ ತಾಯಿ ಸ್ವಲ್ಪ ವಿಚಾರಿಸಿದರೆ ದಿನಗಟ್ಟಲೆ ಊಟ ಬಿಟ್ಟು ಕೂರುವುದು.

ಟೀನೇಜ್ ಗೆಳೆಯರೇ ನಾವೂ ಪ್ರೌಢರಾಗೋಣ. ಯಾರದೋ ಮುಗುಳ್ನಗೆಯನ್ನು, ಗೆಳೆಯ/ಗೆಳತಿ ಕೊಟ್ಟ ಫ್ರೆಂಡ್ಶಿಪ್ ಕಾರ್ಡನ್ನು ಅಥವಾ ಇಂತಹ ಸನ್ನಿವೇಷಗಳನ್ನು ವೈಭವೀಕರಿಸುವುದನ್ನು ನಿಲ್ಲಿಸೋಣ. ಅಪ್ಪ ಕೊಡುವ ಪಾಕೆಟ್ ಮನಿಯನ್ನು ಅಪ್ಪ ಹೇಗೆ ದುಡಿದ ಎಂದು ಯೋಚಿಸೋಣ. ನಮ್ಮ ಭವಿಷ್ಯದ ಬಗ್ಗೆ ಸ್ಪಷ್ಟಪಡಿಸಿಕೊಳ್ಳೋಣ. ನಮ್ಮ ಅಪ್ಪ ಅಮ್ಮಂದಿರ ಬಗ್ಗೆ ಗೌರವಯುತವಾಗಿ ವರ್ತಿಸೋಣ. ನಾವು ಚಿಟ್ಟೆಯಾಗಿ ಬೆಳೆದಿದೇವೆ, ಇನ್ನು ಹಾರಾಡೋಣ. "ಟೀನೇಜ್", "ಮನಸುಗಳ ಪಿಸು ಮಾತು" ಇವೇ ಮುಂತಾದ ಶಬ್ಧಗಳನ್ನು ಬಳಸಿ ಸುಂದರ ಲೇಖನ ಬರೆಯಬಹುದು. ಸಾಧನೆ ವ್ರತ್ತಿಪರತೆಯನ್ನು ಬಯಸುತ್ತದೆ, ಏಕಾಗ್ರತೆಯನ್ನು ಬಯಸುತ್ತದೆ. ಗೆಳೆಯರೇ ಬನ್ನಿ ವ್ರತ್ತಿಪರರಾಗೋಣ. ಇದೇ ರೀತಿ ಇದ್ದರೆ ನಮ್ಮ ಅಪ್ಪ ಯೌವನದಲ್ಲಿ ಸಾಧಿಸಿದ್ದನ್ನು ನಮ್ಮ ಇಡಿ ಜೀವಮಾನದಲ್ಲಿ ಸಾಧಿಸಲಾಗುವುದಿಲ್ಲ.