Wednesday, November 21, 2012

ಆಸರಿಗೆ ಅವಾಂತರ


ನೆಂಟರ ಮನೆಗೆ ಹೋಗಿ ಆಸರಿಗೆ ಕುಡಿಯುವುದೆಂದರೆ ಸಲೀಸು ಎಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ ಆದೀತು. ನನಗೂ ಈಗಿತ್ತಲಾಗಿ ಸತ್ಯದ ಅರಿವಾಯಿತು. ಮಂಗಳ ಕಾರ್ಯಗಳಿಗೆ ಆಮಂತ್ರಣ ನೀಡಲು ಹೋದಾಗ ಎಲ್ಲರ ಮನೆಯಲ್ಲೂ ಆಸರಿಗೆ ಕೆಳುವರಾದರೂ ತಪ್ಪಿಸಿಕೊಳ್ಳುವ ಅವಕಾಶವಿರುತ್ತದೆ. ಪರಿಚಯವಿಲ್ಲದವರ ಮನೆಯಲ್ಲಂತೂ ಸುಲಭವಾಗಿ ಆಸರಿಗೆ ಕುಡಿಯದೆ ಮನೆಯಿಂದ ಹೊರಬೀಳಬಹುದು. ಕೆಲವುಕಡೆ ಎಲೆ ಅಡಿಕೆ ಹಾಕಿ, ಸಕ್ಕರೆ ಬಾಯಿಗೆ ಹಾಕಿಕೊಂಡು, ನೀರುಕುಡಿದು ಬಚಾವಾಗಬಹುದು.

ಮದುವೆಯಾದಮೇಲೆ ಪತ್ನಿಸಮೇತನಾಗಿ ಆಸರಿಗೆ ಕುಡಿಯುವುದನ್ನು ತಪ್ಪಿಸಿಕೊಳ್ಳುವುದು ಬಹುಷಃ ಅಸಾಧ್ಯ. ಬಿಸಿ ಬಿಸಿ ಕಷಾಯ ತಣಿಯುವುದೂ ಇಲ್ಲ ಕುಡಿದು ಲೋಟವನ್ನು ಒಗೆಯುವ ಹಾಗೂ ಇಲ್ಲ. ಹೋದಲ್ಲೆಲ್ಲ ವಿಶೇಷ ಅಡುಗೆ ಅಂತೂ ಇದ್ದೆ ಇರುತ್ತದೆ. ಎಷ್ಟು ಅಂತ ತಿನ್ನಬಹುದು?

ಅವರ ಮನೆಗೆ ಹೋಗಿ ಒಂದು ಬಿಡಿಯ ತೀರಿತಲ್ಲ ಅಂದುಕೊಳ್ಳುವುದರೊಳಗೆ "ನಮ್ಮನೆಯಲ್ಲಿ ಉಳಿದುಕೊಂಡೇ ಇಲ್ಲ" ಎಂಬ ಪುಕಾರು, ಸರಿಯಾಗಿ ಊಟ, ಆಸರಿಗೆ ಮಾಡಿಲ್ಲ ಎಂಬ ಇನ್ನೊಂದು ಪುಕಾರು. ಒತ್ತಾಯದ ಪರಮಾವಧಿ ನೋಡಬಹುದು.

ಹಬ್ಬಕ್ಕೆ ಒಂದು ವಾರ ರಜಾ ಸಿಕ್ಕ ಸಂತೋಷ, ಊರಿಗೆ ಹೋಗಿ ಬರುವುದರೊಳಗೆ ಟುಸ್ಸ್ ಆಗುವುದನ್ನು ಕಣ್ಣಾರೆ ನೋಡಬಹುದು. ಮನೆಯಲ್ಲಿರಲು ಒಂದು ಹೊತ್ತಿನ ಪುರುಸೊತ್ತು ಇಲ್ಲದ ಹಾಗೆ ಓಡಾಟದ ಪಟ್ಟಿ. ಹೋದ ಎಂಟು ದಿನದಲ್ಲಿ ಏನಿಲ್ಲವೆಂದರೂ ೧೦ ಮನೆಯಲ್ಲಿ ಊಟ ಮಾಡಿದ್ದೇವೆ ಆಸರಿಗೆ ಅಂತೂ ಬಿಡಿ.

ಮದುವೆಯಾದವರ ಮೇಲೂ ಈ ರೀತಿಯ ಉಭಯಸಂಕಟವನ್ನು ತಂದೊಡ್ಡುವುದನ್ನು ನಾನು ವಿರೋಧಿಸುತ್ತೇನೆ. ಕೆಲವು ಜನ ಅದು ಹೇಗೆ ಎರಡನೇ ಮದುವೆ ಆಗುತ್ತಾರೋ? ಅವರಿಗೆ "ಕಬ್ನಳ್ಳಿ ರತ್ನ"ವನ್ನು ಕೊಡಬೇಕೆಂದು ಬಲವಾಗಿ ಪ್ರತಿಪಾದಿಸುತ್ತೇನೆ.

1 comment: