Thursday, January 19, 2012

ಕೊಡಚಾದ್ರಿ ಚಾರಣ

ಕಳೆದ ವರ್ಷದಂತೆ ಈ ವರ್ಷವೂ ಪ್ರವಾಸಕ್ಕೆ ಹೋಗುವ ವಿಚಾರ ಬಂದಾಗ ಬೇಡವೆಂದೆ ಹೇಳಿದ್ದೆ. ಏಕೆಂದರೆ ಪ್ರವಾಸಕ್ಕೆ ಹೋಗುವ ಗುಂಪು ನನ್ನ ಯಾವತ್ತಿನ ಗುಂಪಾಗಿರಲಿಲ್ಲ. ಆಮೇಲೆ ಹೇಗಾದರಾಗಲಿ ಎಂದು ಒಪ್ಪಿಕೊಂಡೆ. ಹೋಗುವ ಸ್ಥಳದ ಬಗ್ಗೆ ಚೌಕಾಶಿ ನಡೆಯುತ್ತಿರುವಾಗ ಎಷ್ಟು ಜನ ಹೋಗುವವರು ಎಂದೇನೂ ನನಗೆ ಗೊತ್ತಿರಲಿಲ್ಲ. "ನರಸಿಂಹ ಪರ್ವತ", "ಕುಮಾರ ಪರ್ವತ" ಏನೇನೋ ಕಾರಣಗಳಿಂದ ಹಿಂದೆ ಸರಿದಾಗ "ಕೊಡಚಾದ್ರಿ" ಎಂದು ಸೂಚಿಸಲ್ಪಟ್ಟಿತು. ನನಗೂ ಅಲ್ಲಿ ಊಟ ವಸತಿ ಏರ್ಪಾಡು ಮಾಡುವವರ ಸಂಪರ್ಕ ಸಿಕ್ಕಿತು. ದಿನವೂ ನಿಗದಿಯಾಯಿತು. ಆಗ ಗೊತ್ತಾದದ್ದು ಬರುವವರ ಸಂಖ್ಯೆ ಇಪ್ಪತ್ತರ ಮೇಲಿದೆ ಎಂದು. ಅದರಲ್ಲೂ ಹೆಂಗಳೆಯರೇ ಜಾಸ್ತಿ ಎಂದು. ಪ್ರವಾಸದಿಂದ ಹಿಂದೆ ಸರಿಯಲೇ ಎಂಬ ಯೋಚನೆಯೂ ಬಂದಿತ್ತು. ನನ್ನ ಬಾಲ್ಯ ಸ್ನೇಹಿತ ಮತ್ತು ಅತ್ಯಂತ ಆಪ್ತ ಸ್ನೇಹಿತನು ಬರುತ್ತಿರುವಾಗ ನಾನು ಹಿಂದೆ ಸರಿಯಬಾರದೆಂದು ಹೊರಡಲು ಅನುವಾದೆ.


ಕೊಡಚಾದ್ರಿಗೆ ಬರುವವರು ಇಪ್ಪತ್ತೊಂದು ಜನರೆಂದು ನಿಗದಿಯಾದ ಮೇಲೆ ಯೋಚಿಸಿದಾಗ ಅರ್ಧದಷ್ಟು ಜನ ನನಗೆ ಪರಿಚಯವೇ ಇಲ್ಲವೆಂದು ತಿಳಿಯಿತು. ಆಗ ನಾನು ಪ್ರವಾಸದ ಮೋಜು, ಮಸ್ತಿಯ ಆಸೆಯನ್ನೇ ಬಿಟ್ಟುಬಿಟ್ಟೆ. ಒಪ್ಪಿಕೊಂಡಾಗಿದೆ, ಹೋಗಿಬರುವುದು ಎಂದಷ್ಟೇ ಭಾವಿಸಿದೆ. ಹೇಗೂ ಇಷ್ಟು ಜನ ಬರುತ್ತಿದ್ದಾರೆ ನಾನೂ ಮತ್ತೊಬ್ಬನನ್ನು ಕರೆತರುವೆ ಎಂದು ಯೋಚಿಸಿ ಊರಿನಲ್ಲೇ ಇರುವ ಮತ್ತೊಬ್ಬ ನನ್ನ ಆತ್ಮೀಯನಿಗೆ ಫೋನಾಯಿಸಿದೆ. ಅವನು ಬರುವ ಉತ್ಸಾಹವನ್ನೇನೋ ತೋರಿಸಿದ ಆದರೆ ಬರುವ ಬಗ್ಗೆ ಹಿಂಜರಿದ. ಕೊನೆಗೆ ಹೊರಡುವ ಹಿಂದಿನ ದಿನ ಬರುವುದಾಗಿ ತಿಳಿಸಿ ಬಂದೆ ಬಿಟ್ಟ.


ಈಗ ಯೋಚಿಸಿದರೆ ಪ್ರವಾಸದ ಯಶಸ್ಸು, ಬಂದವರಲ್ಲಿ ಯಾರೊಬ್ಬರು ಇಲ್ಲದಿದ್ದರೂ ಸಾಧ್ಯವಾಗುತ್ತಿರಲಿಲ್ಲ ಎಂದೇ ಅನಿಸುತ್ತದೆ. ವೈಯಕ್ತಿಕವಾಗಿ ನನಗೆ ಇಬ್ಬರು ಹೊಸ ಗೆಳೆಯರು ಸಿಕ್ಕಿದರೆಂದೇ ಹೇಳಬಹುದು. ಎಲ್ಲರೂ ಎಷ್ಟು ಚೆನ್ನಾಗಿ ಬೆರೆತರು, ಒಬ್ಬರಿಗೊಬ್ಬರು ಸಹಾಯ ಮಾಡಿದರು, ಪ್ರವಾಸದ ಮೋಜನ್ನು ಹೆಚ್ಚಿಸಿದರು. ಪ್ರವಾಸ ಇಷ್ಟೊಂದು ಚೆನ್ನಾಗಿ ಆಗುವುದೆಂದು ಕಲ್ಪನೆಯನ್ನೂ ಮಾಡಿರಲಿಲ್ಲ.


ಒಟ್ಟಿನಲ್ಲಿ ವರ್ಷಕ್ಕೊಂದೆರಡು ಬಾರಿ ಪ್ರವಾಸ ಮಾಡುವುದು ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದೆಂದು ಕಂಡುಕೊಂಡೆ. "ಕೊಡಚಾದ್ರಿ" ಎನ್ನುವುದೊಂದು ಪ್ರತಿಮೆ. ಪ್ರವಾಸವೆನ್ನುವುದು ಉಲ್ಲಾಸ ತಂದುಕೊಡುತ್ತದೆ. ಬಹುಷಃ ಯಾವ ಜಾಗಕ್ಕೇ ಹೋದರೂ ಇದೇ ರೀತಿಯ ಸಂತೋಷವಾಗುತ್ತಿತ್ತೇನೋ.

3 comments: