Thursday, December 29, 2011

ದನಗಾವಲು

"ದನ ಕಾಯಲು ಹೋಗು" ಎಂದು ಏನಾದರೂ ದಡ್ಡ ಕೆಲಸ ಮಾಡಿದಾಗ ಬಯ್ಯುವುದು ವಾಡಿಕೆ. ದನಕಯುವುದೇನು ಸದರೆ? ನಿಕ್ರಷ್ಟವೆ? ಅಲ್ಲಾ ಅದೇನು ಬಾಳೆ ದಿಂಡು ಕಡಿದಷ್ಟು ಸುಲಭ ಸಾದ್ಯವೇ?  ಅದಕ್ಕೆಷ್ಟು ಏಕಾಗ್ರತೆ, ವೇಗ, ಚುರುಕು ಬೇಕು ಎಂಬುದು ಸಾರಾಸಗಟಾಗಿ ತಳ್ಳಿಹಾಕುವ ವಿಚಾರವಲ್ಲ. ಏಕಾಗ್ರತೆಯೂ ಬೇಕು ಒಂದೇ ಸಲ ನಾಲ್ಕೆಂಟು ಕಡೆ ಕಣ್ಣು ಹಾಯಿಸುವಷ್ಟು ಚುರುಕುತನವೂ ಬೇಕು. ದನಗಳು ಚೆಲ್ಲಾಪಿಲ್ಲಿಯಾಗಿ ಒಡ ಹೊರಟರೆ ಯಾವಕಡೆಯಿಂದ, ಹೇಗೆ, ಯಾವಾಗ ಯಾವ ಆಕಳನ್ನು ಅಡ್ಡಗಟ್ಟಿದರೆ ಹಿಡಿತ ಸಾಧಿಸಬಹುದು ಎನ್ನುವ ಸೂಕ್ಷ್ಮ ವಿವೇಚನಾ ಬುದ್ಧಿಯಿರಬೇಕು.

ಆಕಳುಗಳು ಮುಂದೆ ಹೋದುವೇ, ಹೋದರೆ ಎಷ್ಟು ಮುಂದೆ ಹೋದುವು, ಎಮ್ಮೆ ಗೇವಿನ ಆಕಳು ಹಿಂದಿದೆಯೇ, ಸಾಮಾನ್ಯವಾಗಿ ಎಮ್ಮೆಗಳು ಮೇಯುವುದು ನಿಧಾನ,ಅವೆಲ್ಲಿವೆ ಎಂದೆಲ್ಲಾ ಹತ್ತು ಹಲವು ಯೋಚನೆಗಳನ್ನು ಒಂದೇ ಸರ್ತಿ ಮಾಡುವ ಗುಣವೇನು ಕಡಿಮೆಯೇ?

ದನ ಕಾಯುವುದು ಕೇವಲ ದೈಹಿಕ ಶ್ರಮ ವಿನಿಯೋಗಿಸಿ ಮಾಡುವ ಕೆಲಸವೆಂದೇ ಎಲ್ಲರೂ ಭಾವಿಸಿದ್ದಾರೆ. ದೈಹಿಕ ಶ್ರಮದೊಂದಿಗೆ ಬೌಧ್ಧಿಕ ಶ್ರಮವೂ ಬೇಕೇಬೇಕು. ಬೌಧ್ಧಿಕ ಚಿಂತನೆಗೆ ಸಮಯವೂ ದೊರೆಯುತ್ತದೆ. ಪಾರಮಾರ್ಥಿಕ ಚಿಂತನೆಗಳನ್ನೂ ಮಾಡಬಹುದು ಎಂಬುದಕ್ಕೆ ಉದಾಹರಣೆಯೂ ಇದೆ.

"ಮಲ್ಲ" ಎನ್ನುವ ದನಕಾಯುವವನನ್ನು ನೋಡಿ ನಾನು ಎಸ್ಟೋ ಸಲ ಆಶ್ಚರ್ಯ ಪಟ್ಟದ್ದಿದೆ. ಅವನ ಆಯುಷ್ಯದಲ್ಲಿ ದನಕಾಯುವುದನ್ನು ಬಿಟ್ಟು ಬೇರೇನನ್ನೂ ಮಾಡದೇ ಅವನು ಆಧ್ಯಾತ್ಮಿ ಆಗಿದ್ದನೆಂದೇ ನನ್ನ ನಂಬಿಕೆ. ಇಹ ಲೋಕದ ಅನೇಕ ಸಂಗತಿಗಳು ಅವನಿಗೆ ತುಚ್ಚವಾಗಿದ್ದುವು. ಯಾವಾಗಲಾದರೂ ಅವನು ಸಿಕ್ಕಾಗ ಸಮಯವು ಎಷ್ಟು ಆಗಿರಬಹುದೆಂದು ಕೇಳಿದರೆ ೧, ೨, ೩, ೪ ಆಗಿರಬಹುದು ಎಷ್ಟು ಆದರೆ ನನಗೇನು ಎನ್ನುತ್ತಿದ್ದ. ಕೇಶಜ್ಜನ ಹತ್ತಿರ ಸಂಬಳ ಚೌಕಾಶಿ ಮಾಡುವಾಗ ದಿನಕ್ಕೆ ೨೦ ರೂಪಾಯಿ ಕೊಡುತ್ತೇನೆ ಎಂದು ಅವರೆಂದರೆ ಇವನು ನಾನು ಈ ಸಂಬಳಕ್ಕೆ ಕೆಲಸ ಮಾಡಲಾರೆ ಎನ್ನುತ್ತಿದ್ದ. ಈ ತುಟ್ಟಿಯ ಕಾಲದಲ್ಲಿ ನೀವು ಕೊಡುವುದು ಕಡಿಮೆ, ಕೊನೇ ಪಕ್ಷ ೧೫ ರೂಪಾಯಿ ಆದರೂ ಕೊಡಿ ಎನ್ನುತ್ತಿದ್ದ. ಅವನ ವೈರಾಗ್ಯಕ್ಕೆ ಇನ್ನೂ ಸಾಕ್ಷಿ ಬೇಕೇ? 

1 comment: