Sunday, November 9, 2025

ಕಾಯುವಿಕೆಗಿಂತ ತಪವು ಇಲ್ಲ..

ತಾಳ್ಮೆಯ ಪಾಠ.. ಕಾಯುವ ಕಾಲದ ಕಥೆ..


ಬಹುಷಃ ನಾವು ಕಾಯುವ ತಾಳ್ಮೆಯನ್ನ ಕಳೆದುಕೊಳ್ಳುತ್ತಿದ್ದೇವೆ. ಏನಕ್ಕೂ ಯಾವುದಕ್ಕೂ ಕಾಯುವ ತಾಳ್ಮೆ ನಮ್ಮಲ್ಲಿ ಕಡಿಮೆ ಆಗ್ತಾ ಇದೆ. ಜೀವನ ಶೈಲಿಯೋ, ತಾಂತ್ರಿಕ ಬೆಳವಣಿಗೆಯೋ ಒಟ್ಟಿನಲ್ಲಿ ನಮಗೆ ತಾಳ್ಮೆ ಕಡಿಮೆ ಆಗ್ತಾ ಇರೋದ್ರಲ್ಲಿ ಅನುಮಾನವಿಲ್ಲ. ಕಾಯುವುದೆಂದರೆ ನಮ್ಮನ್ನು ಯಾರೋ, ಯಾವುದೋ ನಿರ್ಲಕ್ಷ್ಯ ಮಾಡ್ತಾ ಇದೆ ಅಂತ ನಾವು ಅಂದಾಜಿಸುತ್ತಿದ್ದೇವೋ ಏನೋ? ಏನಾದರೂ ತಡವಾದರೆ ಸಹಿಸಲು ಆಗದ ಮನೋಭಾವ ಬೇರೂರ್ತಾ ಇದೆ.

 

ಕಾಯುವುದೆಂದರೆ ಹತಾಶೆಯಿಂದ ಕಾಲಹರಣವಲ್ಲ. ಅದು ನಿರೀಕ್ಷೆ, ವಿಶ್ವಾಸ ಮತ್ತು ಶಾಂತಿಯ ಪರ್ಯಾಯ. ಹಿಂದಿನ ಪೀಳಿಗೆಯವರು ಇದನ್ನು ಬದುಕಿನ ಭಾಗವಾಗಿ ತೆಗೆದುಕೊಂಡಿದ್ದರು. ಅದರ ಒಂದು ಅದ್ಭುತ ಉದಾಹರಣೆ ಎಂದರೆ ಹತ್ತರಗಿ ಬಸ್ಸು. "ಹತ್ತರಗಿ ಬಸ್ಸು" ಎಂಬ ವಿಚಿತ್ರ ನಮ್ಮೂರವರಿಗೆ ಎಲ್ಲರಿಗೂ ಅನುಭವಕ್ಕೆ ಬಂದಿದೆ. ವರ್ಷಗಳ ಹಿಂದೆ ಬೆಳಿಗ್ಗೆ 8.30 ಕೆ ಹತ್ತರಗಿ ಬಸ್ಸು ಬರುತ್ತದೆ ಎಂಬ ಭ್ರಮೆ ಅಲ್ಲಿನವರಿಗೆಲ್ಲರಿಗೂ. ಮೋಟಾರ್ ಸೈಕಲ್, ಕಾರು ಬಹಳ ಅಪರೂಪ. ಎಲ್ಲಿಗಾದರೂ ಹೋಗಬೇಕೆಂದರೆ ಹತ್ತರಗಿ ಬಸ್ಸೊಂದೇ, ಟೆಂಪೋ (ಖಾಸಗಿ ಸಾರ್ವಜನಿಕ ಬಸ್ಸು) ಸಹ ಇಲ್ಲದ ಕಾಲ. ಸೊಸೈಟಿ ಕೆಲಸಕ್ಕಿರಲಿ, ನೆಂಟರ ಮನೆಗೆ ಹೋಗುವುದಿರಲಿ, ವಿಶೇಷಕ್ಕೆ ಹೋಗುವುದಿರಲಿ, ಸಿರ್ಸಿಇಂದ ಮುಂದೆ ಹೋಗುವ ಬಸ್ಸು ಬೇಕಾದ್ರೆ 11 ಗಂಟೆಗೆ ಇರ್ಲಿ, ಬೆಳಿಗ್ಗೆ ಹತ್ತರಗಿ ಬಸ್ಸಿಗೆ ಹೋಗುವುದೊಂದೇ ಮಾರ್ಗ, ಇಲ್ಲದಿದ್ದರೆ 3-4 ಕಿಲೋಮೀಟರು ನಡೆದು ಕುಮಟಾ ರೋಡಿಗೆ ಹೋಗಿ ಬೇರೊಂದು ಬಸ್ಸು ಹಿಡಿಯಬೇಕು.

 

ಹತ್ತರಗಿ ಬಸ್ಸೋ, ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ನಾವು ಹೈಸ್ಕೂಲ್ ಗೆ ಹೋಗುವಾಗ ಬಸ್ಸು ಬರುತ್ತದೋ ಇಲ್ಲವೋ ಎಂದು ಬಾಜಿ ಕಟ್ಟುತ್ತಿದ್ದೆವು. ಜನರೋ ಹತ್ತು ನಿಮಿಷ ಮುಂಚೆಯೇ ಬಂದು ಅಲ್ಲಲ್ಲಿರುವ ಬಸ್ಸ್ಟಾಪಿನಲ್ಲಿ ಕಾಯುತ್ತ ಕೂರುತ್ತಿದ್ದರು. 8.30 ಗೆ ಬರುವ ಬಸ್ಸು 9 ಆದರೂ ಬರಲಿಲ್ಲವೆಂದರೆ, "ಇನ್ನು ಐದು ನಿಮಿಷ ಕಾಯುವ, ಬಸ್ಸು ಬಂದರೆ ಸರಿ, ಇಲ್ಲಾಂದರೆ ಇನ್ನೈದು ನಿಮಿಷ ಕಾಯುವ" ಎಂಬ ತಾಳ್ಮೆಯಲ್ಲಿರುತ್ತಿದ್ದರು. ಕೊನೆಗೆ 9.30 ವರೆಗೆ ಕಾದು, ತುರ್ತು ಕೆಲಸವಿರುವವರು ಕುಮಟಾ ರಸ್ತೆಯ ಕಡೆಗೆ, ತೇಜಿ ಮೇಲಿರುವವರು ಮನೆಯ ಕಡೆಗೆ ಹೆಜ್ಜೆ ಹಾಕುವುದು ವಾಡಿಕೆ. ಇವರಿಗೆಲ್ಲ ತಾಳ್ಮೆಯ, ಕಾಯುವಿಕೆಯ ಪಾಠವನ್ನು ಇನ್ಯಾರು ಚೆನ್ನಾಗಿ ಹೇಳಿಕೊಡಬಲ್ಲರು. ಬಸ್ಸು ಬಂದರೂ, ಬರದಿದ್ದರೂ ಜನ ಸಮಾನಚಿತ್ತರಾಗಿ, ಯಾವುದೇ ಉದ್ವೇಗಕ್ಕೊಳಗಾಗದೇ ಮರುದಿನ ಬಸ್ಸಿಗೆ ಕಾಯುವುದನ್ನು ಬಿಡುತ್ತಿರಲಿಲ್ಲ.

 

ನಾವು ಕಾಲೇಜಿಗೆ ಹೋಗಬೇಕಾದರೆ ಹತ್ತರಗಿ ಬಸ್ಸನ್ನೇ ನೆಚ್ಚಿದ್ದೆವು. ನಾವೂ ಬಸ್ಸಿನ ಯಾವತ್ತಿನ ಸಮಯಕ್ಕಿಂತ ಒಂದು ಗಂಟೆ ಕಾಯುವುದನ್ನ ರೂಢಿಸಿಕೊಂಡಿದ್ದೆವು. ಒಂದು ಗಂಟೆ ಕಾದು, ಬಸ್ಸು ಬರದಿದ್ದರೆ ಕುಮಟಾ ರಸ್ತೆಯ ಕಡೆ ಹೆಜ್ಜೆ ಹಾಕುತ್ತಿದ್ದೆವು. ನಮ್ಮೊಡನೆ ಬರುವ ಒಬ್ಬಳಿಗಂತೂ "ನಡೆದು ಹೋಗುವುದು ತುಂಬಾ ಸುಲಭ, ಸೀದಾ ರಸ್ತೆಯಲ್ಲಿ, ಘಟ್ಟದಲ್ಲಿ ಮಾತ್ರ ನಾವು ಶಕ್ತಿ ಉಪಯೋಗಿಸಿ ನಡೆದರಾಯಿತು, ಇಳುಕಲಿನಲ್ಲಿ "ನ್ಯೂಟ್ರಲ್" ಹಾಕಿದರೆ ತನ್ನಾರೆ ಮುಂದೆ ಹೋಗಬಹುದು" ಎಂದು ನಂಬಿಸಿದ್ದೆವು.

 

ಮಳೆಗಾಲದಲ್ಲಂತೂ ಬಸ್ಸು ಬಂದ ದಿನ ಮನರಂಜನೆಯೂ ಇರುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ಕೆಲವು ಕಡೆ ಒರತೆ ಎದ್ದು ರಸ್ತೆಯಲ್ಲ ಜವುಗಿನ ನೆಲವಾಗಿರುತ್ತಿತ್ತು. ಬಸ್ಸಿನ ಡ್ರೈವರ್ ತನ್ನ ಚಾಕ ಚಕ್ಯತೆ ಉಪಯೋಗಿಸಿ ಬಸ್ಸು ಓಡಿಸಿದರೂ ಒಂದೊಂದು ದಿನ ಬಸ್ಸಿನ ಟೈಯರ್ ಮಣ್ಣಿನಲ್ಲಿ ಹುದುಗಿಹೋಗುತ್ತಿತ್ತು. ಅವತ್ತು ಹುಗಿದ ಬಸ್ಸನ್ನು ತಳ್ಳಿ ಮುಂದೆ ಸಾಗಿಸುವ ಕೆಲಸಕ್ಕೆ ಉರಾನೂರು ಒಟ್ಟಾಗುತ್ತಿತ್ತು. ಜಾನ್ಮನೆ ಪಂಚಾಯತದ ಒಂದೂರಿನ ಜನ ಸೇರಿದರೆ ಮನರಂಜನೆಗೆ ಕೊರತೆಯೇ? ಅಂದಿನ ಕಾಲದಲ್ಲಿ ನಮ್ಮವರಿಗೆ ಮನರಂಜನೆಯ ಕೊರತೆಯಿದೆಯೆಂದೇ KSRTC ಯವರು ಹತ್ತರಗಿ ಬಸ್ಸು ಬಿಡುತ್ತಿದ್ದರೇನೋ ಎಂಬ ಅನುಮಾನವೂ ಇದೆ.

 

ಸಂಜೆ 6 ಗಂಟೆಗೆ ಸಿರ್ಸಿ ಬಸ್ ಸ್ಟ್ಯಾಂಡಿನಿಂದ ಹತ್ತರಗಿ ಬಸ್ಸು ಹೊರಡುವುದು ಎಂಬ ಗುಲ್ಲು ಹರಡಿತ್ತು. ತಿರುಗಾಟಕ್ಕೆ ಹೋದವರು ಅದೇ ಬಸ್ಸಿಗೆ ತಿರುಗಿ ಮನೆಗೆ ಬರುವುದು. ಯಥಾ ಪ್ರಕಾರ ಒಂದು ಗಂಟೆ ಕಾದು, ಬಸ್ಸು ಹೊರಡಲಿಲ್ಲ ಅಂದರೆ KSRTC ಕಾರ್ಯನಿರ್ವಾಹಕನ ಹತ್ತಿರ "6 ಗಂಟೆಗೆ ಬಿಡುವ ಹತ್ತರಗಿ ಬಸ್ಸನ್ನ ಎಷ್ಟು ಗಂಟೆಗೆ ಬಿಡ್ತೀರಿ?" ಎಂದೇ ಕೇಳುತ್ತಿದ್ದರು.

 

ನಮ್ಮಲ್ಲಿ ಸ್ವಲ್ಪವಾದರೂ ತಾಳ್ಮೆ, ಕಾಯುವ ಗುಣ ಇದೆ ಎಂದಾದರೆ, ಅದರಲ್ಲಿ ಹತ್ತರಗಿ ಬಸ್ಸಿನ ಕೊಡುಗೆ ಬಹಳವಿದೆ.

 

ಇಷ್ಟು ಹೇಳಿದ್ರು ನಿಮಗೆ ನಿರೀಕ್ಷೆಯ, ತಾಳ್ಮೆಯ ಅರ್ಥ ಆಗ್ಲಿಲ್ಲ ಅಂದರೆ... ಥೋ!

 


Friday, October 31, 2025

 ಪ್ರಾಸಗಳ ಅಪ್ರಸ್ತುತ ಪ್ರಸಂಗ

ಚಹಾ ಕಪ್‌ ಮತ್ತು ಕವನಗಳ ತಾಪ!

ಕವನಗಳೆಂದರೆ ಹೆದರಲು ನನಗೆ ಸಕಾರಣಗಳಿವೆ. ವಿನಾಕಾರಣ ಹೆದರಲು ನಾನೇನು ಇವನಲ್ಲ. ಮೇಲಿಂದ ಮೇಲೆ ಹಲವು ಅನುಭವಗಳಾಗಿವೆ. ಇದೊಂದು ನನ್ನ ಮದುವೆಯ ನಂತರ ನಡೆದದ್ದು. ಮದುವೆಯ ಮರುದಿನ ಸಂಬಂಧಿಕರು, ಗೆಳೆಯರು ಎಲ್ಲರು ಅವರ ಮನೆಗೆ ಜೋಡಿ ಸಮೇತ ಬಾ ಎಂದು ಕರೆಯುತ್ತಾರೆ ಹಾಗು ಮದುವಣಿಗರು ಅವರವರ ಶಕ್ತ್ಯಾನುಸಾರ ಉಟಕ್ಕೋ, ಚಹಾ ತಿಂಡಿಗೋ ಒಮ್ಮೆ ಹತ್ತಿರದವರ ಮನೆಗೆ ಭೇಟಿ ಕೊಡುತ್ತಾರೆ. ನಾನೂ ಸಹ ನನ್ನ ಮದುವೆಯ ಮರುದಿನಗಳಲ್ಲಿ ನೆಂಟರಿಷ್ಟರ ಮನೆಗಳಿಗೆ ಹೋಗಿಬಂದಾದಮೇಲೆ ಒಬ್ಬರು ಹತ್ತಿರದವರ ಮನೆಗೆ ಭೇಟಿ ಕೊಡದೆಹೋದರೆ ತರವಲ್ಲ ಎಂದು ಯೋಚಿಸಿದೆ ಮತ್ತು ಒಂದು ಚಹಾ ಕುಡಿದು ಅವರ ದಾಕ್ಷಿಣ್ಯ ತೀರಿಸಿಬಿಡುವುದೆಂದು ವಿನುತಾಳೊಂದಿಗೆ ಅವರ ಮನೆಗೆ ಹೋದೆ.

ಮನೆಯ ಯಜಮಾನ ತಾನು ಅಂದುಕೊಂಡಿರುವ ಸಂಬಂಧಿಕ ಮನೆಯಲ್ಲಿರಲಿಲ್ಲ. ಅಷ್ಟರ ಮಟ್ಟಿಗೆ ಬಚಾವಾದೆ ಎಂದು ತಿಳಿದು ಒಳಗೆ ಹೋದೆವು. ಒಳಗೆ ಮನೆಯ ಯಜಮಾನಿ ಏನೋ ಹೊಲಿಗೆ ಕೆಲಸ ಮಾಡುತ್ತಿದ್ದಳು. ನಮ್ಮನ್ನು ನೋಡಿ ಮಾತನಾಡಿಸಿ ಕುಳಿತುಕೊಳ್ಳಲು ಹೇಳಿದಳು. ನಾನು ಬೇಗನೆ ವಾಪಸಾಗುವ ಇಚ್ಛೆಯಿಂದ ಚಹಾ ಮಾಡಲು ಹೇಳಿದೆ. ಸುಮ್ಮನಿರಲಾರದೆ ಏನೋ ಬಿಟ್ಟುಕೊಂಡ ಅಂತೇನೋ ಗಾದೆ ಮಾತಿದೆಯಲ್ಲ ಹಾಗೆಯೇ ನಾನು ವಿನುತಾಳೊಂದಿಗೆ ಯಜಮಾನಿಯ ಪ್ರತಿಭೆಗಳ ಬಗ್ಗೆ ದೊಡ್ಡದಾಗಿ ಹೇಳಿದೆ.

ಅಷ್ಟು ಹೇಳಿದೆ ತಡ ಯಜಮಾನಿ ವಿನುತಾಳ ಎದುರಿಗೆ ಅವಳ ಪ್ರತಿಭೆಗಳ ಅನಾವರಣ ಮಾಡಬೇಕೆಂದು ತಿಳಿದಳೋ ಏನೋ ಚಹಾ ಮಾಡುವುದನ್ನು ನಿಲ್ಲಿಸಿ ಒಂದು ಕವನಗಳನ್ನು ಬರೆದಿರುವ ಪಟ್ಟಿಯನ್ನು ನಮ್ಮ ಮುಂದೆ ಹಿಡಿದಳು. ಆಗ ನನಗೆ ನನ್ನ ತಪ್ಪಿನ ಅರಿವಾಯಿತು. ನಾವು ಒಂದೊಂದೇ ಕವನ ಓದಿದಂತೆ ಆ ಕವನದ ದ್ವನ್ಯಾರ್ಥ, ಅವು ಹುಟ್ಟಿದ ರೀತಿ, ಹಾಗು ಅದರ ವಿಶೇಷತೆ ಮುಂತಾದವನ್ನು ಯಜಮಾನಿ ಹೇಳುತ್ತಿದ್ದಳು. ಆ ಕವನಗಳೋ ಹಲಕೆಲವು ಪ್ರಾಸಗಳ ಅಸಂಬದ್ದ ಜೋಡಣೆಗಳಂತೆ ನನಗೆ ಕಂಡವು. ಅವುಗಳನ್ನು ಓದುವುದು ಒಂದು ತೆರನಾದ ಹಿಂಸೆಯಾದರೆ ಕವನಗಳ ಬಗ್ಗೆ ರಚಿಸಿದವಳ ವಿಶ್ಲೇಷಣೆ ಇನ್ನೊಂದು ತೆರನಾದದು. ಆ ಕವನದ ಪಟ್ಟಿಯನ್ನು ತೆಗೆದು ಹರಿದು ಬಿಸಾಡಬೇಕೆಂಬ ಬಯಕೆಯನ್ನು ಹೀಗೆ ತಡೆದು ಕೊಂಡೆನೋ ದೇವರೇ ಬಲ್ಲ. ವಿನುತಾಳೋ ನನ್ನ ನೋಡಿ ಮುಸಿ ಮುಸಿ ನಗುತ್ತಿದ್ದಳು, ಮಾಡಿದ ತಪ್ಪಿಗೆ ಈಗ ಅನುಭವಿಸು ಎನ್ನುವ ರೀತಿಯಲ್ಲಿ.

ಯಜಮಾನಿಯು ನಮ್ಮೂರಿನ ಇನ್ನೊಬ್ಬ ಪ್ರತಿಭಾನ್ವಿತ ಕವಿಗಳೊಂದಿಗೆ ಸೇರಿ ಒಂದೆರಡು ಕವನಗಳನ್ನು ಬರೆದಿದ್ದಳಂತೆ. ಅವನ್ನು ತರುತ್ತೇನೆಂದು ಆಕೆ ಮೆತ್ತು ಹತ್ತಿ ಹೋದಳು. ದೇವರು ಅವನೇ ಪ್ರತ್ಯಕ್ಷನಾಗುವುದಿಲ್ಲವಂತೆ ಯಾರದೋ ರೂಪದಲ್ಲಿ ಬರುತ್ತಾನಂತೆ. ಈ ಮಾತು ಆ ದಿನ ಅಕ್ಷರಶಃ ಸತ್ಯವಾಯಿತು, ಯಜಮಾನನೆಂದು ಅಂದುಕೊಂಡಿರುವ ಕವಯಿತ್ರಿಯಾದವಳ  ಗಂಡ ದೇವರ ರೂಪದಲ್ಲಿ ಬಂದು ನಮ್ಮನ್ನು ಕವನಗಳ ಕೂಪದಿಂದ ಮುಕ್ತಿಕೊಡಿಸಿದ. ಮೊದಲು ಚಹಾ ಮಾಡು ಉಳಿದದ್ದೆಲ್ಲ ಆಮೇಲೆ ಎಂದು ಯಜಮಾನಿಗೆ ಹೇಳಿ ಅವನು ನಮ್ಮ ಪ್ರಾಣ ಕಾಪಾಡಿದ.

ಇದೆ ತರಹ ಕವನಗಳ ವಿಷಯದಲ್ಲಿ ನನಗೆ ಹಲವು ಅನುಭವಗಳಾಗಿವೆ. ಇನ್ನೊಂದೆರಡು ಆದರೆ ಬಹುಷಃ ಫೋಬಿಯಾಗಳ ಸಾಲಿಗೆ "ಕವನ ಫೋಬಿಯಾ" ಎಂಬೊಂದು ಹೊಸದನ್ನು ಸೇರಿಸಬೇಕಾಗಬಹುದು. ಪ್ರಾಸ ಪದಗಳನ್ನು ಅಸಂಬದ್ಧವಾಗಿ ಜೋಡಿಸಿದರೆ ಕವನ ಆಗುವುದೇ? ಅದೊಂದು ರೀತಿಯಲ್ಲಿ ನವ್ಯ ಚಿತ್ರಕಲೆಯಂತೆಯೇ. ಅರ್ಥವಿಲ್ಲದ ಬಣ್ಣದ ಎರಚಾಟ.
ಕೆ ಎಸ್ ನರಸಿಂಹ ಸ್ವಾಮಿಗಳು ಬರೆದ ಮೈಸೂರು ಮಲ್ಲಿಗೆ, ಕುವೆಂಪುರವರು ಬರೆದ ಕೆಲವು ಕವನಗಳು ಎಲ್ಲ ಓದಿದ್ದೇನೆ. ಅವು ಅದೆಷ್ಟು ಸುದರವಾಗಿ ಮೂಡಿಬಂದಿವೆ, ಅರ್ಥಪೂರ್ಣವಾಗಿವೆ.

ಇವರು ಒಂದಷ್ಟು ಕವನಗಳನ್ನು ಗೀಚಿ, ಮನೆಗೆ ಯಾರಾದರು ಬರುವುದನ್ನೇ ಕಾಯುತ್ತಿರುತ್ತಾರೇನೋ ಎಂಬಂತೆ ಬಂದವರಿಗೆ ಕೊರೆಯುತ್ತಾರೆ. ಬಿಸಿ ಬಿಸಿ ಚಹಾ ಕೊಟ್ಟು ಕುಳ್ಳಿರಿಸಿ ತಮ್ಮ ಬತ್ತಳಿಕೆಯಿಂದ ಕವನಗಳನ್ನು ಹೊರತೆಗೆಯುತ್ತಾರೆ. ಚಹಾ ಕುಡಿಯದೆ ಎದ್ದೇಳುವಂತೆಯೂ ಇಲ್ಲ ಇವರ ಕೊರೆತ ಸಹಿಸಲೂ ಸಾಧ್ಯವಿಲ್ಲ.

 ನಲವತ್ತಕ್ಕೆ ಪಾದಾರ್ಪಣೆ - ಒಂದು ನಗು, ಒಂದು ಅರಿವು


ಅಯ್ಯೋ, ನಂಬಲಾಗ್ತಾ ಇಲ್ಲ ಅಲ್ವಾ. ನಾವು ಈಗ ನಲವತ್ತುದಾಟಿದ್ದೇವೆ ಅಥವಾ ನಲವತ್ತರಲ್ಲಿದ್ದೇವೆ! ಮನಸ್ಸಿನೊಳಗೆ ಇನ್ನೂ 20–25 ವರ್ಷದ ಉತ್ಸಾಹ ಇದೆ. ಹೊಸ ಕನಸುಗಳು, ಹೊಸ ಯೋಜನೆಗಳು. ಎಲ್ಲವೂ ಹಾಗೆ ಇದೆ. ಕೆಲವೊಮ್ಮೆ ಒಂದು ದಿನದ ಭಾರಿ ಕೆಲಸದ ನಂತರ ಸುಸ್ತಾಗುತ್ತೆ, ವಿಶ್ರಾಂತಿ ಬೇಕಾಗುತ್ತದೆ. ಇದು ಒಂದು ವಿಚಿತ್ರ ಹಂತ. ನೆನಪುಗಳು, ಹೆಮ್ಮೆ, ಸ್ವಲ್ಪ ಆಲೋಚನೆ - ಎಲ್ಲವೂ ಸೇರಿ ಒಂದು ಮಿಶ್ರ ಭಾವನೆ.


ನಮ್ಮ ಪೀಳಿಗೆ ನಿಜಕ್ಕೂ ಅದೃಷ್ಟಶಾಲಿ. ನಾವು ಡಿಜಿಟಲ್ ಕ್ರಾಂತಿ ಮೊದಲು ಜನಿಸಿದ ಕೊನೆಯ ತಲೆಮಾರು. ನಮ್ಮ ಬಾಲ್ಯದಲ್ಲಿ ಸ್ನೇಹ ಅಂದ್ರೆ ಎದುರು ನೋಡಿಕೊಂಡು ಮಾತಾಡೋದು, ಪತ್ರ ಬರೆಯೋದು, ಕೂಗಿ ಕರೆಯೋದು. ಆಟ ಅಂದ್ರೆ ಗೋಲಿ, ಬುಗುರಿ, ಬೆಂಕಿ ಪೊಟ್ಟಣದ ಆಟ... 


ಆ ದಿನಗಳು ಅದೆಷ್ಟು ಸುಂದರವಾಗಿದ್ದವು ಅಲ್ವಾ! ಮಳೆ, ಉಂಬಳ, ಸೈಕಲ್, ಚಿಟಿ ಬಿಲ್ಲು, ತೇರು, ವಿ ಡಿ ಅಂಗಡಿಯ ಶೇಂಗಾ ಇವು ನಮ್ಮ ಜೀವನದ ಭಾಗ. ಸ್ಮಾರ್ಟ್‌ಫೋನ್ ಇರಲಿಲ್ಲ, ಫೇಸ್ಬುಕ್ ಇರಲಿಲ್ಲ, ಆದರೆ ಮೋಜು ಮಸ್ತಿಗೆ ಬರಗಾಲವಿರಲಿಲ್ಲ.


ನಾವು ಅನುಭವಿಸಿದ ಬದಲಾವಣೆ ನೋಡಿದರೆ ಆಶ್ಚರ್ಯವಾಗುತ್ತದೆ, ಕಪ್ಪು-ಬಿಳಿ ಟಿವಿಯಿಂದ ಹಿಡಿದು ಕೈಯಲ್ಲೇ ಮೊಬೈಲ್ ಸ್ಕ್ರೀನ್. ಇನ್‌ಲ್ಯಾಂಡ್ ಪತ್ರದಿಂದ ಇಂದಿನ ವಾಟ್ಸಪ್ ಮೆಸೇಜ್ ತನಕ, ಗೋಲಿ ಆಟದಿಂದ ಇಂದಿನ ವೀಡಿಯೋ ಕಾಲ್ ತನಕ - ಎರಡು ಯುಗಗಳನ್ನು ಬದುಕಿದ್ದೇವೆ ನಾವು! ಇದು ದೊಡ್ಡ ಭಾಗ್ಯ.


ಇಗೀಗ ನಲವತ್ತರಲ್ಲಿ ನಿಂತು ನೋಡಿದರೆ, ಜೀವನ ಎಷ್ಟು ವೇಗವಾಗಿ ಹೋಗಿ ಬಿಟ್ತೊ ಅನ್ನಿಸುತ್ತೆ. ಕೆಲಸ, ಮನೆ, ಜವಾಬ್ದಾರಿ.. ಇವುಗಳ ನಡುವೆ ನಾವು ಹಿಂದೆ ನೋಡೋ ಸಮಯವೇ ಇಲ್ಲ. ಆದರೆ  ನಾವೆಲ್ಲಾ ಸ್ನೇಹಿತರು ಮತ್ತೆ ಸೇರಿದಾಗ, ಆ ಹಳೆಯ ಕಾಲ ಮತ್ತೆ ಜೀವಂತವಾಗುತ್ತದೆ. ಅದೇ ನಗು, ಅದೇ ಟೀಕೆ.. ಮತ್ತೆ ಪ್ರಯತ್ನಿಸೋಣ..


ನಲವತ್ತು ಅಂದ್ರೆ ಮಧ್ಯ ವಯಸ್ಸಲ್ಲ , ಅದು ಹೊಸ ಆರಂಭ. ಈಗ ಬದುಕನ್ನು ನಾವು ಹೊಸ ದೃಷ್ಟಿಯಿಂದ ನೋಡ್ತೀವಿ. ಹಿಂದೆ ವೇಗ ಮುಖ್ಯವಾಗಿತ್ತು; ಈಗ ಶಾಂತಿ ಮುಖ್ಯವಾಗ್ತಾ ಇದೆ. ಈಗ ಸಮಯದ ಮೌಲ್ಯ ಗೊತ್ತಾಗ್ತಾ ಇದೆ, ಅದನ್ನ ಹೇಗೆ ಬಳಸಬೇಕು ಎಂಬುದು ಅರಿವಾಗ್ತಾ ಇದೆ. 


ನಲವತ್ತು ಹೇಳುತ್ತದೆ, ಸ್ವಲ್ಪ ನಿಲ್ಲು, ಉಸಿರೆಳೆ, ಬದುಕು ಅನುಭವಿಸು. ಆರೋಗ್ಯದ ಕಡೆ ಗಮನ ಕೊಡು, ಮನಸ್ಸಿಗೆ ಶಾಂತಿ ಕೊಡು, ಹತ್ತಿರದವರ ಜೊತೆ ಸಮಯ ಕಳೆ. ಯಶಸ್ಸು ಮುಖ್ಯ, ಆದರೆ ಮನಸ್ಸಿಗೆ ಶಾಂತಿ ಕೊಡುವ ಕ್ಷಣಗಳು ಅದಕ್ಕಿಂತ ಬೆಲೆಬಾಳುತ್ತವೆ.


ಕುಟುಂಬ, ಸಂಬಂಧ, ಸ್ನೇಹ, ನೆನಪುಗಳು - ಇವು ನಮ್ಮ ನಿಜವಾದ ಸಂಪತ್ತು. ಹೃದಯದಿಂದ ಬಂದ ನಗು, ಒಟ್ಟಿಗೆ ಕಳೆದ ಸಮಯ, ಪರಸ್ಪರದ ಬೆಂಬಲ ಇವು ಶಾಶ್ವತ.


ನಲವತ್ತು ಒಂದು ತಿರುವು. ಜೀವನದ ಹೊಸ ಅಧ್ಯಾಯಕ್ಕೆ ಇದು ದಾರಿ. ಈ ಹಂತದಲ್ಲಿ ನಾವು ಅನುಭವವನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ. ಇದು ಬದುಕನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶ.


ನಲವತ್ತು ನಮ್ಮೊಳಗೆ ಹೊಸ ಶಾಂತಿ, ಹೊಸ ಉತ್ಸಾಹ, ಹೊಸ ದೃಷ್ಟಿ ತರುತ್ತದೆ.


ಹೀಗಾಗಿ ನಲವತ್ತನ್ನ ಆಚರಿಸೋಣ - ಮನಸ್ಸು ಸದಾ ಉತ್ಸಾಹದಿಂದ ತುಂಬಿರಲಿ


ಮತ್ತೆ ಸಿಗೋಣ, ಸಿಕ್ಕಿ ಹರಟೋಣ..